ಜೀ ಕನ್ನಡ ಟಿವಿ ಶೋನಲ್ಲಿ ಕಣ್ಣೀರಿಟ್ಟ ಅರ್ಜುನ್ ಸರ್ಜಾ
ವಾರದಿಂದ ವಾರಕ್ಕೆ ಜನಪ್ರಿಯತೆ ಪಡೆಯುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಭಾನುವಾರದ (ಆ 17) ಎಪಿಸೋಡಿನಲ್ಲಿ ಪಂಚಭಾಷಾ ನಟ , ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅರ್ಜುನ್ ಸರ್ಜಾ ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲೇ ತಾಯಿ ತನ್ನ ಬಗ್ಗೆ ಆಡಿದ ಅಭಿಮಾನದ ಮಾತಿನಿಂದ ಕಣ್ಣೀರಿಟ್ಟ ಅರ್ಜುನ್, ನನ್ನ ತಂದೆ (ಶಕ್ತಿಪ್ರಸಾದ್) ನಮ್ಮನ್ನು ಗೆಳೆಯನ ಹಾಗೇ ಬೆಳೆಸಿದರು. ಸಿನಿಮಾದಲ್ಲಿ ಮಾತ್ರ ಅವರು ವಿಲನ್ ಆಗಿದ್ದರು, ನಿಜ ಜೀವನದಲ್ಲಿ ಅವರು ನಮ್ಮನ್ನು ಬೆಳಿಸಿದ ಶಿಸ್ತಿನ ಜೀವನದಿಂದ ನಾವು ಇಂದು ಈ ಮಟ್ಟದಲ್ಲಿದ್ದೇವೆ ಎಂದಿದ್ದಾರೆ. (ವೀಕೆಂಡ್ ವಿತ್ ರಮೇಶ್ ವಿತ್ ಪುನೀತ್ ರಾಜಕುಮಾರ್)
ಸಿಪಾಯಿ ರಾಮು ಚಿತ್ರದ ಸನ್ನಿವೇಶವೊಂದರಲ್ಲಿ ರಾಜಕುಮಾರ್ ಜೊತೆಗಿನ ಹೊಡೆದಾಟದ ದೃಶ್ಯದಲ್ಲಿ ನನ್ನ ತಂದೆಯ ಮೂಗಿನಿಂದ ರಕ್ತ ಬರುತ್ತದೆ. ಥಿಯೇಟರ್ ನಲ್ಲಿ ಚಿತ್ರ ವೀಕ್ಷಿಸುತ್ತಿದ್ದ ನಾನು, ಯಾರು ನಮ್ಮಪ್ಪನನ್ನು ಹೊಡೆಯುವುದು ಎಂದು ಕಿರುಚಾಡಿದ್ದೆ ಎಂದು ಹಳೆ ನೆನಪನ್ನು ಹೊರಹಾಕಿದ್ದಾರೆ. (ಕಾರ್ಯಕ್ರಮದ ವಿಡಿಯೋ)
ಸಿಂಹದ ಮರಿ ಸೈನ್ಯದ ಮೂಲಕ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ಮೊದ ಮೊದಲು ನಟನೆಯ ಗಂಧಗಾಳಿ ಇಲ್ಲದಿದ್ದರೂ, ನಟಿಸಬಹುದು ಎನ್ನುವ ಆತ್ಮವಿಶ್ವಾಸ ನನ್ನಲ್ಲಿತ್ತು. ನನ್ನ ಆತ್ಮವಿಶ್ವಾಸ, ಹೆತ್ತವರ ಮತ್ತು ಕುಟುಂಬದವರ ಪ್ರೀತಿ ನನ್ನನ್ನು ಈ ಮಟ್ಟಕ್ಕೆ ಬೆಳಿಸಿದೆ ಎಂದು ಅರ್ಜುನ್, ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಭಾವುಕರಾಗಿ ನುಡಿದರು. (ವೀಕೆಂಡ್ ವಿತ್ ರಮೇಶ್ ವಿತ್ ರವಿಚಂದ್ರನ್)

ತಮಿಳು ಚಿತ್ರಗಳಿಗೆ ಎಂಟ್ರಿ
ಇತ್ತೀಚೆಗೆ ನಿಧನಹೊಂದಿದ ರಾಮನಾರಾಯಣ್ ನನ್ನನ್ನು ತಮಿಳಿಗೆ ಪರಿಚಯಿಸಿದರು. ನಾನು ಅಲ್ಲಿ ನೆಲೆಯೂರಲು ಅಷ್ಟು ಶ್ರಮ ಪಡಲಿಲ್ಲ. ಒಂದೇ ದಿನ ಏಳು ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದೂ ಉಂಟು ಎಂದು ತಮಿಳಿನಲ್ಲಿ ತನ್ನ ಆರಂಭದ ದಿನವನ್ನು ಅರ್ಜುನ್ ನೆನಪಿಸಿಕೊಂಡಿದ್ದಾರೆ.

ಸಾಲು ಸಾಲು ಸೋಲು ಕಂಡೆ
ಐವತ್ತು ಚಿತ್ರಗಳಲ್ಲಿ ನಟಿಸುವವರೆಗೂ ನಾನು ಚಿತ್ರೋಧ್ಯಮವನ್ನು ಸೀರಿಯಸ್ ಆಗಿ ತೆಗೆದುಕೊಂಡವನಲ್ಲ. ಐವತ್ತು ಚಿತ್ರದ ನಂತರ ನನ್ನ ಚಿತ್ರಗಳು ಸಾಲು ಸಾಲು ಸೋಲು ಅನುಭವಿಸಿತು. ನನ್ನ ಬೇಡಿಕೆ ಕಮ್ಮಿಯಾಯಿತು, ಕೈಯಲ್ಲಿ ಚಿತ್ರಗಳಿಲ್ಲದೇ ಹತಾಶನಾಗಿದ್ದೆ. ನಟನೆ ಬಿಟ್ಟರೆ ನನಗೆ ಸ್ವಲ್ಪ ಮಟ್ಟಿಗೆ ಗೊತ್ತಿದ್ದು ನಿರ್ದೇಶನ. ನನ್ನ ಗಮನ ನಿರ್ದೇಶನದ ಕಡೆಗೆ ವಾಲಿತು.

ಆಸ್ತಿ ಮಾರಿ ಹಣಕೊಟ್ಟ ತಾಯಿ
ಆ ಸಮಯದಲ್ಲಿ ನನಗೆ ಆರ್ಥಿಕ ಸಮಸ್ಯೆ ಕಾಡುತ್ತಿತ್ತು. ನನ್ನ ತಾಯಿ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿ ನನಗೆ ದುಡ್ಡು ಕೊಟ್ಟಿದ್ದರು. ಆ ಸಮಯದಲ್ಲಿ ತಾಯಿ ಮತ್ತು ಹೆಂಡತಿ ನನಗೆ ಆತ್ಮಸ್ಥೈರ್ಯ ತುಂಬಿದರು.

ಮದುವೆಯ ಬಗ್ಗೆ ಪ್ರಸ್ತಾಪಿಸಿದ ಅರ್ಜುನ್
ನಾನು ಮತ್ತು ಆಶಾ (ನಿವೇದಿತಾ) ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದೆವು. ಶೂಟಿಂಗ್ ಸಮಯದಲ್ಲಿ ನನ್ನ ಕೈಗೆ ಏಟಾಗಿ ರಕ್ತ ಬರಲಾರಂಭಿಸಿತು. ಆಗ ಆಶಾ ಅದನ್ನು ನೋಡಿ ಕಣ್ಣೀರುಡುತ್ತಿದ್ದಳು. ಆಗ ನನ್ನನ್ನು ಮದುವೆಯಾಗುತ್ತೀಯಾ ಎಂದು ಪ್ರಪೋಸ್ ಮಾಡಿದೆ. ಆಕೆ ಯೆಸ್ ಎಂದಳು. ನಂತರ ಈ ವಿಚಾರವನ್ನು ನನ್ನ ತಾಯಿಗೆ ತಿಳಿಸಿದೆ.

ನಮ್ಮದು ಸುಂದರ ಸಂಸಾರ
ತಾಯಿ ನನ್ನ ಮದುವೆ ಪ್ರಸ್ತಾವವನ್ನು ಆಶಾ ತಂದೆ ( ಕನ್ನಡದ ಹಿರಿಯ ನಟ ಕಲಾತಪಸ್ವಿ ರಾಜೇಶ್) ಮುಂದಿಟ್ಟರು. ಈಗಲೇ ಏಕೆ, ಐದು ವರ್ಷವಾಗಲಿ ಎಂದು ರಾಜೇಶ್ ಹೇಳಿದರು. ನಂತರ ನಮ್ಮ ಮನೆಯ ಒತ್ತಾಯಕ್ಕೆ ಒಪ್ಪಿದರು ಎಂದು ಅರ್ಜುನ್ ಕಾರ್ಯಕ್ರಮದಲ್ಲಿ ಹೇಳಿದರು.

ಮಾವನನ್ನು ನೆನೆಸಿಕೊಂಡ ಅಳಿಯಂದಿರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿರಂಜೀವಿ ಸರ್ಜಾ ಮತ್ತು ಧ್ರುವ್ ಸರ್ಜಾ, ನಮಗೆ ಈಗಲೂ ಏನಾದರು ಬೇಕಾದರೆ ಮೊದಲು ಕೇಳುವುದು ಕರಾಟೆ ಮಾಮನನ್ನ (ಅರ್ಜುನ್ ಸರ್ಜಾ). ಅವರಿಂದಾಗಿ ನಾವು ಚಿತ್ರೋಧ್ಯಮದಲ್ಲಿ ನೆಲೆ ಕಂಡಿದ್ದೇವೆ. ನಮ್ಮನ್ನು ತಮ್ಮ ಮಕ್ಕಳಂತೆ ನೋಡಿಕೊಂಡಿದ್ದಾರೆ ಎಂದು ಅರ್ಜುನ್ ಬಗ್ಗೆ ಪ್ರೀತಿಯ ಮಾತನ್ನಾಡಿದ್ದಾರೆ.


Click it and Unblock the Notifications











