ಅಚ್ಚರಿ ಮೂಡಿಸಲಿರುವ ಸುವರ್ಣ ಐದನೇ ಫಿಲಂ ಅವಾರ್ಡ್
ಸುವರ್ಣ ವಾಹಿನಿ ಅರ್ಪಿಸುವ ಐದನೇ ಫಿಲಂ ಅವಾರ್ಡ್ಸ ಇದೇ ಶನಿವಾರ ಜೂನ್ 8 ಮತ್ತು ಭಾನುವಾರ 9ರಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಮಯ್ಯಾಸ್ ಅರ್ಪಿಸುವ ಈ ಫಿಲಂ ಅವಾರ್ಡ್ಸ ಸತತ ಐದು ವರ್ಷಗಳಿಂದ ಕನ್ನಡ ಚಿತ್ರರಂಗದ ಸಹಯೋಗದೊಂದಿಗೆ ಅಲ್ಲಿನ ಪ್ರತಿಭಾವಂತ ತಂತ್ರಜ್ಞ ಕಲಾವಿದರನ್ನು ಗುರುತಿಸಿ, ಗುರುತರ ರೀತಿಯಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದೆ.
ಇದು ಐದನೇ ಚಲನಚಿತ್ರ ಪ್ರಶಸ್ತಿ ಸಮಾರಂಭವಾಗಿರುವುರಿಂದ ಸುವರ್ಣ ವಾಹಿನಿ ಕೊಂಚ ಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇಡೀ ಚಿತ್ರರಂಗದ ಪ್ರಮುಖರು ಇದರಲ್ಲಿ ಪಾಲ್ಗೊಂಡಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿದೆ ಎನ್ನುತ್ತಾರೆ ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್.
ಕನ್ನಡ ಚಿತ್ರೋದ್ಯಮದ ಜೊತೆ ನಿರಂತರ ಒಡನಾಟ ಹೊಂದಿರುವ ಸುವರ್ಣ ವಾಹಿನಿ ಈ ಬಾರಿಯೂ ಪ್ರತಿಭಾವಂತರಿಗೆ ಪುರಸ್ಕಾರ ನೀಡುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎನ್ನುವುದು ಅನುಪ್ ಅವರ ಅಭಿಪ್ರಾಯ.

ಐದನೇ ವರ್ಷದಲ್ಲಿ ಏನಿದೆ ಅಂಥ ವಿಶೇಷತೆ?
ಕನ್ನಡ ಕಂಡ ಕನಸುಗಾರ ವಿ ರವಿಚಂದ್ರನ್ ಈ ವರೆಗೆ ಯಾವುದೇ ಫಿಲಂ ಅವಾರ್ಡ್ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದನ್ನು ಯಾರೂ ನೋಡಿರಲಿಕ್ಕಿಲ್ಲ. ಸುವರ್ಣ ವಾಹಿನಿಯಲ್ಲಿ ಮಾತ್ರ ಇಂಥದ್ದೊಂದು ಪ್ರಯತ್ನ ನಡೆದಿದೆ. ಸ್ವತಃ ರವಿಚಂದ್ರನ್ ಅವರ ಸೂಪರ್ ಹಿಟ್ ಗೀತೆಗಳಿಗೆ ಹೆಜ್ಜೆ ಹಾಕಿದ್ದಾರೆ.

ಕಾರ್ಯಕ್ರಮದ ವಿಶೇಷತೆ
ಇದೇ ಜೂನ್ 8 ಮತ್ತು 9ರಂದು (ಶನಿವಾರ ಮತ್ತು ಭಾನುವಾರ) ಸಂಜೆಯಂದು ರವಿಚಂದ್ರನ್ ಹೆಜ್ಜೆ ಹಾಕುವುದನ್ನು ಸುವರ್ಣ ವಾಹಿನಿಯಲ್ಲಿ ನೋಡಬಹುದಾಗಿದೆ. ಮೂವರು ಬಂಗಾರದ ಬೊಂಬೆಗಳಾದ ಪರೋಲ್ ಯಾದವ್, ದೀಪಿಕಾ ಕಾಮಯ್ಯ(ಚಿಂಗಾರಿ ಚಿತ್ರದ ನಾಯಕಿ) ಮತ್ತು ಸಿಂಧು ಲೋಕನಾಥ್(ಡ್ರಾಮಾ) ‘ರವಿಮಾಮ'ನಿಗೆ ಸಾಥ್ ನೀಡಲಿದ್ದಾರೆ. ರವಿಚಂದ್ರನ್ ಸಿಪಾಯಿ ಗೆಟಪ್ ನಲ್ಲಿ ವೇದಿಕೆ ಮೇಲೆ ಜೀಪಿನಲ್ಲಿ ಬಂದು ಅಚ್ಚರಿ ಮೂಡಿಸಲಿದ್ದಾರೆ.

ಕಾರ್ಯಕ್ರಮದ ಹೈಲೈಟ್ಸ್
ಹೆಚ್ಚಿನ ವಾಹಿನಿಗಳಲ್ಲಿ ಮಾಮೂಲಿ ಎನಿಸುವಂತೇ performance ಮಾಡುವ ಪ್ರತಿಭೆಗಳನ್ನು ಹೊರತಾಗಿ, ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ಕಲಾವಿದರನ್ನು ಸುವರ್ಣ ವಾಹಿನಿಯ ಈ ಸಮಾರಂಭದ ಮೂಲಕ ನೋಡಬಹುದಾಗಿದೆ. ಉ.ದಾ. ಚೆಲುವಿನ ಚಿತ್ತಾರ ಖ್ಯಾತಿಯ ಅಮೂಲ್ಯಾ ಹೆಚ್ಚು ಕಡೆ ಕಾಣಿಸಿಕೊಂಡಿಲ್ಲ. ಅವಾರ್ಡ್ ಕಾರ್ಯಕ್ರಮದಲ್ಲಿ ಕುಣಿದಿಲ್ಲ. ಪ್ರಥಮ ಬಾರಿಗೆ ಅಮೂಲ್ಯಾ ಡ್ಯಾನ್ಸ್ ಮಾಡಿದ್ದಾರೆ. ಅದೇ ರೀತಿ ಸಿಂಪಲ್ ಆದ್ ಲವ್ ಸ್ಟೋರಿ ಖ್ಯಾತಿಯ ಶ್ವೇತಾ ಶ್ರೀವಾತ್ಸವ್, ಪ್ಯಾರ್ಗೇ ಆಗ್ ಬಿಟೈತೇ ಹಾಡಿಗೆ ಮೈ ಚಳಿಬಿಟ್ಟು ಕುಣಿದ ಪಾರೋಲ್ ಯಾದವ್ ಡ್ಯಾನ್ಸ್ ಝಲಕ್ ತೋರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರೇಮ್
ಚಾರ್ಮಿನಾರ್ ಚೆಲುವ ನೆನಪಿರಲಿ ಪ್ರೇಮ್ ತಮ್ಮ ಚಿತ್ರದ ಹಿಟ್ ಗೀತೆಗಳಿಗೆ ಪರಫಾರ್ಮ್ ಮಾಡಿದ್ದಾರೆ. ಸಂಜು ವೆಡ್ಸ್ ಗೀತಾ ಖ್ಯಾತಿಯ ಶ್ರೀನಗರ ಕಿಟ್ಟಿ ಎಂಬತ್ತು ವರ್ಷದ ಕನ್ನಡ ಚಲನಚಿತ್ರ ಇತಿಹಾಸ ಹಾಗೂ ನೂರು ವರ್ಷದ ಭಾರತೀಯ ಚಿತ್ರರಂಗದ ಇತಿಹಾಸವನ್ನು ಪ್ರತಿಬಿಂಬಿಸುವ ಹಾಡುಗಳಿಗೆ ಅಮೋಘ ಎನಿಸುವ ರೀತಿಯಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ನಾಯಕಿಯ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಗಳಿಸಲು ಪ್ರಬಲ ಪೈಪೋಟಿ ನಡೆಸಿರುವ ರಾಧಿಕಾ ಪಂಡಿತ್ ರಂಗುರಂಗಾದ ಹಾಡುಗಳಿಗೆ ರಂಗೇರಿಸುವ ರೀತಿಯಲ್ಲಿ ನರ್ತನ ಮಾಡಿದ್ದಾರೆ. ಪ್ರೇಮ್ ಅಡ್ಡಾ ಚಿತ್ರದ ಬಸಂತಿ ಹಾಡಿಗೆ ಐಂದ್ರಿತಾ ರೇ ಕುಣಿದರೆ, ಸಾರಥಿ, ಪರಮಾತ್ಮ ಚಿತ್ರದ ನಾಯಕಿ ದೀಪಾ ಸನ್ನಿಧಿ ಪ್ರಪ್ರಥಮ ಬಾರಿಗೆ ಕಿರುತೆರೆ ಸಮಾರಂಭವೊಂದರಲ್ಲಿ ಭಾಗವಹಿಸಿ, ಹುಚ್ಚೆದ್ದು ಕುಣಿಸುವ ಮಟ್ಟಕ್ಕೆ ಹೆಜ್ಜೆ ಹಾಕಿರುವುದು ಸಮಾರಂಭದ ಇನ್ನೊಂದು ಹೈಲೈಟ್.

ತ್ರಿಮೂರ್ತಿ ಸಂಗಮ!
ಇಡೀ ಕಾರ್ಯಕ್ರಮದ ಕೇಂದ್ರಬಿಂದುಗಳು ಹಾಸ್ಯ ಚಟಾಕಿಗಳಾದ ಸಾಧುಕೋಕಿಲಾ, ರವಿಶಂಕರ್ ಹಾಗೂ ತಬಲಾ ನಾಣಿ. ಈ ಮೂವರೂ ಸೇರಿ ಇಡೀ ಸಮಾರಂಭಕ್ಕೆ ಬೇರೆ ರೀತಿಯಾದ ಕಳೆ ಕಟ್ಟಿಕೊಡಲಿದ್ದಾರೆ. ಹಂತಹಂತದಲ್ಲೂ ಹಾಸ್ಯದ ಹೊಳೆ ಹರಿಸುವ ಬೇರೆ ಬೇರೆ ಹಂತದಲ್ಲಿ ರಾಜಕಾರಣಿಗಳಾಗಿ, ಕಪಟ ಸ್ವಾಮಿಗಳಾಗಿ ಅಲ್ಲಲ್ಲಿ ಬಂದು ಕಚಗುಳಿ ಇಡಲಿದ್ದಾರೆ. ನಕ್ಕು ನಲಿಸಲಿದ್ದಾರೆ. ಇವರಿಗೆ ಅಲ್ಲಲ್ಲಿ ಕೈ ಜೋಡಿಸಲು ಬರಲಿದ್ದಾರೆ ಹಾಸ್ಯ ಕಲಾವಿದ ಮಿಮಿಕ್ರಿ ದಯಾನಂದ್.

ಕಾರ್ಯಕ್ರಮದಲ್ಲಿ ವಿಭಿನ್ನ ಕಾರ್ಯಕ್ರಮ
ಈ ಎಲ್ಲ ಮನರಂಜನೆಯ ಜೊತೆ 2012ನೇ ಸಾಲಿನಲ್ಲಿ ಬಂದು ಹೋದ ಚಲನಚಿತ್ರಗಳಲ್ಲಿ ಉತ್ತಮ ಚಿತ್ರ ಹಾಗೂ ಅತ್ಯುತ್ತಮ ಕಲಾವಿದರನ್ನು ಗುರುತಿಸಿ, ಅಂಥವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.


Click it and Unblock the Notifications











