'ಮುಂಗಾರು ಮಳೆ' ಚಿತ್ರಕ್ಕೆ ಹೊಸಬರನ್ನು ಹಾಕಿಕೊಳ್ಳಿ ಅಂದಿದ್ದು ಪುನೀತ್ ಮತ್ತು ರಾಘಣ್ಣ: ಯೋಗರಾಜ್ ಭಟ್
'ಮುಂಗಾರು ಮಳೆ' ಕನ್ನಡ ಚಿತ್ರರಂಗದ ದಿಕ್ಕನೇ ಬದಲಿಸಿದ ಸಿನಿಮಾ. ಸ್ಯಾಂಡಲ್ವುಡ್ ಪಾಲಿಗೆ ಈ ಸಿನಿಮಾ ಒಂದು ಟ್ರೆಂಡ್ ಸೆಟ್ಟರ್. 2006 ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ತೆರೆಕಂಡ ಈ ಹೊಸಬರ ಸಿನಿಮಾ ಬಾಕ್ಸಾಫೀಸ್ನಲ್ಲಿ ಏನೋ ಜಾದು ಮಾಡುತ್ತೆ ಎಂದು ಕೊಂಡಿರಲಿಲ್ಲ. ಬಹಳ ದಿನಗಳ ಬಳಿಕ ಒಂದು ಸಿನಿಮಾ ಬರೋಬ್ಬರಿ 1 ವರ್ಷ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಕನ್ನಡ ಸಿನಿಮಾದ ಎಲ್ಲಾ ದಾಖಲೆಗಳನ್ನೂ ಚಿಂದಿ ಮಾಡಿತ್ತು. ಇದೇ ಸಿನಿಮಾಗೀಗ 15 ವರ್ಷದ ಸಂಭ್ರಮ.
ಮೊದಲ ಎರಡು ವಾರ ಸಿನಿಮಾ ನೋಡಲು ಜನರು ಚಿತ್ರಮಂದಿರಕ್ಕೆ ಬರಲಿಲ್ಲ. ಆದರೆ, ಸಿನಿಮಾದಲ್ಲಿದ್ದ ಹೊಸತನ ಯಶಸ್ಸಿಗಾಗಿ ಕಾದು ಕೂತಿತ್ತು. ಜನರು ಕೈ ಬಿಡಲಿಲ್ಲ ಜನರಿಂದ ಜನರಿಗೆ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ಹರಡಲು ಶುರುವಾಗಿತ್ತು. ನೋಡ ನೋಡುತ್ತಿದ್ದಂತೆ ಕನ್ನಡಕ್ಕೊಬ್ಬ ಸ್ಟಾರ್ ಸಿಕ್ಕಿದ್ದ. ಅದ್ಭುತ ನಿರ್ದೇಶಕ, ಛಾಯಾಗ್ರಾಹಕ, ಕಥೆಗಾರ, ಸಾಹಿತಿ, ಸಂಗೀತ ನಿರ್ದೇಶಕ ಸಿಕ್ಕಿದ್ದರು. ಇಲ್ಲಿಂದ ಶುರುವಾದ ಇವರ ಪಯಣ ಇಂದಿಗೂ ಮುಂದುವರೆದಿದೆ. ಆದರೆ, 15 ವರ್ಷಗಳ ಬಳಿಕ ಈ ಸಿನಿಮಾ ಕೆಲವು ಗುಟ್ಟುಗಳನ್ನು ಹೊರ ಹಾಕಿದ್ದಾರೆ.

ಹೊಸಬರಿಗೆ ಸಿನಿಮಾ ಅಂದಿದ್ದು ಪುನೀತ್-ರಾಘಣ್ಣ
ಸ್ಯಾಂಡಲ್ವುಡ್ ಲವ್ ಸ್ಟೋರಿ ಬಿಟ್ಟು ಬೇರೆ ವಿಷಯದ ಮೇಲೆ ಸಿನಿಮಾ ಮಾಡಿದ್ದು ತೀರಾ ವಿರಳ. ಎಂತಹದ್ದೇ ಕಥೆ ಇದ್ದರೂ, ಅಲ್ಲೊಂದು ಲವ್ ಸ್ಟೋರಿ ಇರಲೇ ಬೇಕಿತ್ತು. ಹೀಗಾಗಿ ಇದೇ ಲವ್ ಸ್ಟೋರಿಯನ್ನು ವಿಭಿನ್ನವಾಗಿ ತೆರೆಮೇಲೆ ತರುವುದಕ್ಕೆ ಮುಂದಾಗಿದ್ದ ಯೋಗರಾಜ್ ಭಟ್ ಮತ್ತು ಅವರ ತಂಡ. ಆರಂಭದ ದಿನಗಳಲ್ಲಿ ಈ ಸಿನಿಮಾ ಕಥೆಯನ್ನು ಹಲವರಿಗೆ ಹೇಳಿದ್ದರು. ಪುನೀತ್ ರಾಜ್ಕುಮಾರ್ ಅವರಿಗೂ ಕಥೆ ಹೇಳಲಾಗಿತ್ತು. ಆಗ ಅಪ್ಪು ಸಿನಿಮಾದ ಕಥೆ ಕೇಳುತ್ತಿದ್ದ ರಾಘಣ್ಣ 'ಮುಂಗಾರು ಮಳೆ'ಯನ್ನು ಹೊಸಬರಿಗೆ ಮಾಡಿ ಎಂದು ಸಲಹೆ ನೀಡಿದ್ದರು. ಆಗಲೇ ಯೋಗರಾಜ್ ಭಟ್ ಗಣೇಶ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದರು. ಈ ಮಾತನ್ನು ಸ್ವತ: ಯೋಗರಾಜ್ ಭಟ್ ಜೀ ಕನ್ನಡ ಗೋಲ್ಡನ್ ಗ್ಯಾಂಗ್ ಪ್ರೋಮ್ದಲ್ಲಿ ರಿವೀಲ್ ಮಾಡಿದ್ದಾರೆ.

ಕಥೆ ಕೇಳಿ ನಿರ್ಮಾಪಕರು ನಿದ್ದೆ ಹೋಗಿದ್ದರು
ಗಣೇಶ್- ಪೂಜಾ ಗಾಂಧಿ ಜೋಡಿ ತೆರೆಮೇಲೆ ಇಷ್ಟೊಂದು ಮೋಡಿ ಮಾಡುತ್ತೆ ಅನ್ನುವುದು ಅಂದು ಊಹಿಸುವುದಕ್ಕೆ ಕಷ್ಟ ಆಗಿತ್ತು. ಆದರೆ, ಈ ಕಥೆಯನ್ನು ಯೋಗರಾಜ್ ಭಟ್ ಮತ್ತು ತಂಡ ಕೆಲ ನಿರ್ಮಾಪಕರಿಗೆ ಹೇಳಿದ್ದರು. ಆ ವೇಳೆ ನಡೆದ ಘಟನೆಯೊಂದನ್ನು 'ಮುಂಗಾರು ಮಳೆ' ಸಿನಿಮಾಗೆ ಛಾಯಾಗ್ರಾಹಕರಾಗಿದ್ದ ಕೃಷ್ಣ ಸ್ವಾರಸ್ಯವಾಗಿ ಹೇಳಿದ್ದಾರೆ. ನಿರ್ಮಾಪಕರ ಬಳಿಕ ಕಥೆ ಹೇಳಲು ಶುರು ಮಾಡುತ್ತಿದ್ದಂತೆ ಮಳೆಯ ಜೊತೆ ಲವ್ ಸ್ಟೋರಿ ಕೇಳಿ ನಿದ್ದೆಗೆ ಜಾರಿದ್ದರಂತೆ.

ಮೊದಲ ಟೈಟಲ್ 'ಚುಮ್ಮ'
ಗಣೇಶ್, ಯೋಗರಾಜ್ ಭಟ್, ಕೃಷ್ಣ, ಪ್ರೀತಂ ಗುಬ್ಬಿ, ಮನೋಮೂರ್ತಿ ಇವೆರೆಲ್ಲರಿಗೂ ಹೊಸ ಜನ್ಮ ನೀಡಿದ್ದು, 'ಮುಂಗಾರು ಮಳೆ'. ಆದರೆ, ಈ ಸಿನಿಮಾದ ಮೊದಲ ಟೈಟಲ್ ಇದಲ್ಲ. ಈ ಯಶಸ್ವಿ ಜೋಡಿ ಮೊದಲು ಇಟ್ಟ ಟೈಟಲ್ 'ಚುಮ್ಮ' ಅಂತೆ. ಬಹುಶ: ಇದೇ ಸಿನಿಮಾಗೆ 'ಚುಮ್ಮ' ಅಂತ ಮರುನಾಕರಣ ಮಾಡಿದರೆ, ಜನರು ಇಷ್ಟ ಪಡುವುದು ಅನುಮಾನ. ಅಂದು 'ಚುಮ್ಮ' ಅಂತ ಟೈಟಲ್ ಇಟ್ಟಿದ್ದರೆ, ಜನರೂ ಸಿನಿಮಾ ನೋಡುತ್ತಿದ್ದರೋ ಇಲ್ಲವೋ?

'ಮುಂಗಾರು ಮಳೆ' ಹೈಲೈಟ್ ಏನು?
ಜೀ ಕನ್ನಡ ವಿಶೇಷ ಕಾರ್ಯಕ್ರಮ ಕಳೆದ ಎರಡು ವಾರಗಳಿಂದ ಭಾರೀ ಸದ್ದು ಮಾಡುತ್ತಿದೆ. ಗಣೇಶ್ ನಡೆಸಿಕೊಡುವ 'ಗೋಲ್ಡನ್ ಗ್ಯಾಂಗ್' ಕಿರುತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿದೆ. ಈ ವಾರ 'ಮುಂಗಾರು ಮಳೆ' ತಂಡ ಭಾಗವಹಿಸುತ್ತಿದ್ದು, ಅದರ ಹೈಲೈಟ್ ಏನು ಅಂದರೆ, ಯೋಗರಾಜ್ ಭಟ್ ಲವ್ ಫೆಲ್ಯೂರ್, ಛಾಯಾಗ್ರಾಹಕ ಕೃಷ್ಣ ನಿದ್ದೆ ಹೋಗಿದ್ದು, ಯೋಗರಾಜ್ ಭಟ್ ಎರಡು ಫ್ಲಾಪ್ ಸಿನಿಮಾ ನೀಡಿದ್ದು ಇವೆಲ್ಲವೂ 'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮದಲ್ಲಿ ಪ್ರಸಾರ ಆಗಲಿದೆ.


Click it and Unblock the Notifications











