ಆಘಾತ, ನೋವುಗಳ ನಡುವೆ ನನ್ನನ್ನು ಖಿನ್ನತೆ ಆವರಿಸಿತ್ತು: ಶರ್ಮಿಳಾ ಮಾಂಡ್ರೆ
ನಟಿ ಶರ್ಮಿಳಾ ಮಾಂಡ್ರೆ ಮತ್ತೆ ಚಿತ್ರರಂಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸತೀಶ್ ನೀನಾಸಂ ಜತೆ ನಟಿಸುತ್ತಿರುವ 'ದಸರಾ'ದ ನಿರ್ಮಾಣದ ಜವಾಬ್ದಾರಿಯೂ ಅವರ ಮೇಲಿದೆ. ಇನ್ನೊಂದೆಡೆ ಯೋಗರಾಜ್ ಭಟ್ಟರ 'ಗಾಳಿಪಟ-2' ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಚಿತ್ರೀಕರಣ ಶೇ 40ರಷ್ಟು ಮುಗಿದಿವೆ.
Recommended Video
ಸಿನಿಮಾ ಚಟುವಟಿಕೆಗಳಿಗೆ ಅವಕಾಶ ನೀಡಿದ್ದರೂ ಈ ಸಮಯದಲ್ಲಿ ಅಪಾಯ ಎಳೆದುಕೊಳ್ಳುವುದು ಬೇಡ ಎಂದು ಅವರು 'ದಸರಾ' ಚಿತ್ರದ ಚಿತ್ರೀಕರಣ ಮುಂದುವರಿಸಲು ಮುಂದಾಗಿಲ್ಲ. ಚಿತ್ರಕ್ಕೆ ಸಂಬಂಧಿಸಿದಂತಹ ಮಾತುಕತೆಗಳನ್ನು ವಿಡಿಯೋ ಕಾಲ್ ಮೂಲಕ ಮುಂದುವರಿಸಿದ್ದಾರೆ. ಎಲ್ಲವೂ ಸರಿಯಾಗಿದ್ದರೆ 'ದಸರಾ' ಮತ್ತು 'ಗಾಳಿಪಟ 2' ಎರಡೂ ಈ ವೇಳೆಗೆ ತೆರೆಗೆ ಬರಬೇಕಿತ್ತು.
ಈ ಮಧ್ಯೆ ಲಾಕ್ ಡೌನ್, ಅಪಘಾತ ಪ್ರಕರಣ, ಗಾಯದ ನೋವು ಹೀಗೆ ಸಾಲು ಸಾಲು ಸಂಕಷ್ಟಗಳ ನಡುವೆ ಶರ್ಮಿಳಾ ಮಾಂಡ್ರೆ ಮತ್ತೊಂದು ಸಮಸ್ಯೆಗೂ ಒಳಗಾಗಿದ್ದರು. ಅದು ಖಿನ್ನತೆ. ಮುಂದೆ ಓದಿ.

ನೋವಿನ ನಡುವೆ ಕಳೆಯುವುದು ಕಷ್ಟ
ಅಪಘಾತ ಪ್ರಕರಣ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಗಾಸಿಗೊಳಿಸಿತ್ತು. ಅದರ ಜತೆಗೆ ಎಲ್ಲಿ ನೋಡಿದರೂ ನೋವಿದ್ದೇ ಸುದ್ದಿಗಳು. ನೋವಿನಿಂದ ಮನೆಯಲ್ಲಿ ಕೂರುವುದು ಬಹಳ ಕಷ್ಟ. ಯಾವಾಗಲೂ ಸಿನಿಮಾ ಕೆಲಸಕ್ಕಾಗಿ ಹೊರಗೆ ಓಡಾಡುತ್ತಿದ್ದವಳು. ಈ ಆಘಾತಗಳ ನಡುವೆ ಅಪ್ಪಳಿಸಿದ ಕೆಟ್ಟ ಸುದ್ದಿ ಚಿರಂಜೀವಿ ಸರ್ಜಾ ಅವರ ಸಾವು.

ಆಘಾತ ಮೂಡಿಸಿದ್ದ ಸುದ್ದಿ
ಚಿರಂಜೀವಿ ಮತ್ತು ನಾನು 'ಆಕೆ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದೆವು. ಅವರು ಬಹಳ ಅದ್ಭುತ ವ್ಯಕ್ತಿ. ಸೆಟ್ನಲ್ಲಿ ಯಾವಾಗಲೂ ಖುಷಿಯಾಗುತ್ತಿದ್ದವರು. ಯಾಕೆ ಟೆನ್ಷನ್ ಮಾಡಿಕೊಳ್ತೀರಿ ಎಂದು ರೇಗಿಸುವವರು. ಸರಳ ಮತ್ತು ಹಸನ್ಮುಖಿಯಾಗಿದ್ದ ಅವರು ಹೃದಯಾಘಾತದಿಂದ ತೀರಿಕೊಂಡರು ಎಂಬ ಸುದ್ದಿ ಬಹಳ ಆಘಾತ ಮೂಡಿಸಿತ್ತು.

ಮಾನಸಿಕ ಖಿನ್ನತೆ
ನಮ್ಮ ಸುತ್ತಲೂ ನಡೆಯುತ್ತಿದ್ದ ನೆಗೆಟಿವ್ ಸಂಗತಿಗಳು ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಚಿರಂಜೀವಿ ಸರ್ಜಾ ಅಗಲಿಕೆ, ಸುಶಾಂತ್ ಸಿಂಗ್ ಸಾವು ಎರಡನ್ನೂ ನಿರೀಕ್ಷಿಸಿರಲು ಸಾಧ್ಯವಿರಲಿಲ್ಲ. ಹೊರಗಂತೂ ಕೇವಲ ದುಃಖ ನೋವಿನ ಸುದ್ದಿಗಳೇ ತುಂಬಿದ್ದವು. ಸಾಮಾಜಿಕ ಜಾಲತಾಣಗಳನ್ನು ನೋಡಿದರೂ ಮತ್ತೆ ಅದೇ ಸಂಕಷ್ಟ. ಒಮ್ಮೆ ಇನ್ಸ್ಟಾಗ್ರಾಂನಲ್ಲಿ 'ನಿಮ್ಮ ಮೂಡ್' ಹೇಗಿದೆ ಎಂದು ಕೇಳಿದೆ. ಜನರ ಸ್ಥಿತಿ ಬದಲಾಗುತ್ತಿದೆಯೇನೋ ಎಂದು ತಿಳಿಯಲು. ಆದರೆ ಅಲ್ಲಿ ಬಂದಿದ್ದು ಕಷ್ಟ, ಅಹವಾಲುಗಳದ್ದೇ ಉತ್ತರ. ಇಂತಹ ನೆಗೆಟಿವ್ ವಿಚಾರಗಳೇ ತುಂಬಿ ನನ್ನಲ್ಲಿ ಖಿನ್ನತೆ ಉಂಟಾಗಿತ್ತು ಎಂದು ಶರ್ಮಿಳಾ ತಿಳಿಸಿದ್ದಾರೆ.

ಸಿನಿಮಾ ಕೆಲಸಗಳಲ್ಲಿ ಬಿಜಿ
ಮನೆಯವರೊಂದಿಗೆ ಮಾತನಾಡುವ ಮೂಲಕ, ವ್ಯಾಯಾಮ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಈ ಖಿನ್ನತೆಯಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಅದರ ನಡುವೆ ಸಿನಿಮಾ ಚಟುವಟಿಕೆಗಳು ಶುರುವಾಗಿದ್ದರಿಂದ ನನ್ನ ಸಿನಿಮಾದ ಕೆಲಸಗಳಲ್ಲಿ ಮನೆಯಿಂದಲೇ ತೊಡಗಿಸಿಕೊಳ್ಳುತ್ತಿದ್ದೇನೆ. ಸಿನಿಮಾದ ಕುರಿತು ಇನ್ನಷ್ಟು ಸ್ಪಷ್ಟತೆ ಮತ್ತು ತಿದ್ದುವಿಕೆಗೆ ಸಮಯ ಸಿಕ್ಕಂತೆ ಆಗಿದೆ ಎಂದಿದ್ದಾರೆ.

ಟೀಚರ್ ಆದ ಶರ್ಮಿಳಾ
'ಗಾಳಿಪಟ-2' ಚಿತ್ರದಲ್ಲಿ ಶರ್ಮಿಳಾ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರು ಪವನ್ ಕುಮಾರ್ಗೆ ಜೋಡಿ. ಯೋಗರಾಜ್ ಭಟ್ಟರ ಸಿನಿಮಾದಲ್ಲಿ ನಟಿಸುವುದು ನನ್ನ ಕನಸು. ಅದು ಈ ಚಿತ್ರದಲ್ಲಿ ಈಡೇರಿದೆ. ಅವರ ಸಿನಿಮಾಗಳಲ್ಲಿ ನಟಿಯರಿಗೆ ಅಷ್ಟೇ ಪ್ರಾಮುಖ್ಯ ಇರುತ್ತದೆ. ತೆರೆಯ ಮೇಲೆ ನಟಿಯರನ್ನು ತೋರಿಸುವ ಬಗೆಯೂ ವಿಭಿನ್ನ. ಅಲ್ಲದೆ ಗಣೇಶ್ ಜತೆ 'ಕೃಷ್ಣ' ಚಿತ್ರ ಮಾಡಿದ ಸುಮಾರು ಹತ್ತು ವರ್ಷಗಳ ಬಳಿಕ ಮತ್ತೆ ನಟಿಸಿದ್ದೇನೆ ಎಂದು ತಿಳಿಸಿದರು.

'ದಸರಾ' ಹಬ್ಬದ ನಂಟು
ಮೊದಲ ಚಿತ್ರ 'ಸಜನಿ' ಮಾಡಿದಾಗ ನನಗೆ 17 ವರ್ಷ. ಆಗ ನಿರ್ಮಾಣದ ಕುರಿತು ತಿಳಿವಳಿಕೆ ಇರಲಿಲ್ಲ. ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗುತ್ತಿತ್ತು. ಈಗ ನಿರ್ಮಾಣದ ಬಗ್ಗೆ ಹೆಚ್ಚು ಜ್ಞಾನ ಬಂದಿದೆ. ಮೊದಲು ಸಿನಿಮಾಕ್ಕೆ 'ವೈತರಣಿ' ಎಂದು ಹೆಸರಿಡಲಾಗಿತ್ತು. ಆದರೆ ಅದಕ್ಕೆ ಒಂದು ಹಬ್ಬದ ಹೆಸರು ಆಪ್ತವಾಗುತ್ತದೆ ಎಂದು ಜನರ ಮುಂದೆ ಇಟ್ಟೆವು. ಹೆಚ್ಚಿನವರು 'ದಸರಾ' ಹೆಸರು ಸೂಚಿಸಿದರು. ನನಗೂ ಇಷ್ಟವಾಯ್ತು. ನನಗೆ ಮೈಸೂರು ಎಂದರೆ ಇಷ್ಟ. ನನ್ನ ಐದಾರು ಸಿನಿಮಾಗಳ ಶೂಟಿಂಗ್ ಅಲ್ಲಿಯೇ ಆಗಿದೆ. ಅವರು ನಟಿಸಿದ್ದ 'ನವಗ್ರಹ' ಚಿತ್ರ ಮೈಸೂರು ಹಾಗೂ ದಸರಾಕ್ಕೆ ಸಂಬಂಧಿಸಿತ್ತು. ಹೀಗಾಗಿ ಅದರ ಬಗ್ಗೆ ಒಂದು ಅಟ್ಯಾಚ್ಮೆಂಟ್ ಇದೆ ಎನ್ನುತ್ತಾರೆ ಶರ್ಮಿಳಾ.


Click it and Unblock the Notifications











