ಭೂಮಾಫಿಯಾಗೆ ಬೆವರಿಳಿಸಲು ಸಜ್ಜಾಗುತ್ತಿರುವ ದರ್ಶನ್
ಬಾಕ್ಸ್ ಆಫೀಸ್ ಸುಲ್ತಾನ್ ಮತ್ತು ಚಾಲೆಂಜಿಂಗ್ ಸ್ಟಾರ್ ಬಿರುದಾಂಕಿತ ದರ್ಶನ್ ತೂಗುದೀಪ್ ಗಾಂಧಿನಗರದ ಬಹುಬೇಡಿಕೆಯ ನಟ. ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ದರ್ಶನ್ ಸ್ಟಾರ್ ವ್ಯಾಲ್ಯೂ ಏರುತ್ತಲೇ ಇದೆ.
ಅವರ ಇತ್ತೀಚಿನ ಬುಲ್ ಬುಲ್ ಚಿತ್ರ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿ, ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯುವತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ 50ನೇ ದಿನದ ಸಂಭ್ರಮಾಚಾರಣೆಯನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಜುಲೈ 12ರಂದು ಆಚರಿಸಲಾಗಿತ್ತು.
ಈ ಕಾರ್ಯಕ್ರದಲ್ಲಿ ಭಾಗವಹಿಸಿದ್ದ ದರ್ಶನ್ ತನ್ನ ಮುಂದಿನ ಚಿತ್ರದ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡರು. ಬೃಂದಾವನ ಚಿತ್ರದ ನಂತರ ದರ್ಶನ್ ಒಪ್ಪಿಕೊಂಡಿರುವ ಚಿತ್ರ 'ಅಂಬರೀಶ'. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಮಹೇಶ್ ಸುಖಧರೆ.

'ಅಂಬರೀಶ' ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಇರುವ ಚಿತ್ರ. ಬೆಂಗಳೂರಿನಲ್ಲಿ ವ್ಯಾಪಕವಾಗಿ ಸಾಗುತ್ತಿರುವ ಭೂಮಾಫಿಯಾದ ಸುತ್ತಮುತ್ತ ನಡೆಯುವ ಕಥಾನಕ. ಭೂಮಾಫಿಯಾದ ಅಕ್ರಮನ್ನು ಹೊರಗೆಳೆಯುವುದೇ ಚಿತ್ರದ ಕಥಾವಸ್ತು.
ಅಂಬರೀಶ ಚಿತ್ರಕ್ಕೂ ಭಕ್ತ ಅಂಬರೀಶ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೆಯೇ ರೆಬಲ್ ಸ್ಟಾರ್ ಅಂಬರೀಶ್ ವೈಯಕ್ತಿಕ ಜೀವನಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
ಅವರ ಮೇಲಿನ ಪ್ರೀತಿಯಿಂದ ಚಿತ್ರಕ್ಕೆ ಅಂಬರೀಶ ಎಂದು ಹೆಸರಿಟ್ಟಿದ್ದೇವೆ. ಇಷ್ಟು ದಿನ ನನ್ನ ಮೇಲೆ ಮತ್ತು ನನ್ನ ಚಿತ್ರದ ಮೇಲೆ ಅಭಿಮಾನಿಗಳು ತೋರಿದ ಪ್ರೀತಿ ಈ ಚಿತ್ರದಲ್ಲೂ ಮುಂದುವರಿಯಲಿ ಎಂದು ದರ್ಶನ ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಅವರಿಗೆ ಹಾರ್ಲೆ ಡೇವಿಡ್ಸನ್ ಬೈಕನ್ನು ಉಡುಗೊರೆಯಾಗಿ ನೀಡಲಾಯಿತು.
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬೃಂದಾವನ' ಚಿತ್ರದಲ್ಲಿ ವಿಹರಿಸುತ್ತಿದ್ದಾರೆ. ಐಸ್ ಲ್ಯಾಂಡಿನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ.


Click it and Unblock the Notifications











