ಜಲಪ್ರಳಯ : ಕೈಕಟ್ಟಿ ಕುಳಿತ ಕನ್ನಡ ಚಿತ್ರರಂಗ!
ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಸಂಕಷ್ಟಕ್ಕೊಳಗಾಗುವ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚ ಬೇಕೆಂದು ಶಾಸನವೇನೂ ಇಲ್ಲ. ಅದು ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಕಷ್ಟಕ್ಕೆ ಸ್ಪಂದಿಸುವುದು ಅಷ್ಟೇ.
ಸಹಾಯ ಅಂದ ಕೂಡಲೇ ಅದು ದುಡ್ದಿನ ಸಹಾಯ ಮಾತ್ರ ಆಗಬೇಕೆಂದಿನೂ ಇಲ್ಲ, ಅದು ಸಂತ್ರಸ್ತರಿಗೆ ದಿನಸಿ ಪದಾರ್ಥ, ಬಟ್ಟೆಬರೆ, ಮಾತ್ರೆ ಮುಂತಾದವನ್ನು ಕಳುಹಿಸುವ ಮೂಲಕ ಅಥವಾ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕವೂ ಸಹಾಯ ಹಸ್ತ ಚಾಚಬಹುದು.
ಆರೇಳು ವರ್ಷಗಳ ಹಿಂದಿನ ಕನ್ನಡ ಚಿತ್ರರಂಗವೇ ಬೇರೆ, ಈಗಿನ ಚಿತ್ರರಂಗವೇ ಬೇರೆ. ಇಲ್ಲಿ ಈಗ ಕೋಟಿ ಲೆಕ್ಕದಲ್ಲೇ ಚಿತ್ರ ನಿರ್ಮಾಣವಾಗುತ್ತಿದೆ. ಕೋಟಿ ಲೆಕ್ಕದಲ್ಲೇ ಸಂಭಾವನೆ ಪಡೆಯುವವರೂ ಇದ್ದಾರೆ. ನಮ್ಮ ಚಿತ್ರಗಳೂ ಲಾಭಗಳಿಸುತ್ತಿದೆ.

ಸೋಮವಾರ ನಾವು ಪ್ರಕಟಿಸಿದ (ರುದ್ರಪ್ರಳಯ:ಸಂತ್ರಸ್ತರಿಗೆ ಮಾನವೀಯತೆ ಮೆರೆದ ಸೆಲೆಬ್ರಿಟಿಗಳು) ಲೇಖನಕ್ಕೆ ಬಹಳಷ್ಟು ಮಂದಿ ಓದುಗರು ಕನ್ನಡ ಚಿತ್ರರಂಗದಿಂದ ಯಾರೂ ಸಹಾಯ ಮಾಡಲಿಲ್ಲವೇ ಎನ್ನುವ ಕಾಮೆಂಟ್ ಮಾಡಿದ್ದರು. ಅಧಿಕೃತವಾಗಿ ಮತ್ತು ಅನಧಿಕೃತವಾಗಿ ನಮಗೆ ಸಿಕ್ಕ ಮಾಹಿತಿ ಪ್ರಕಾರ ಕನ್ನಡ ಚಿತ್ರರಂಗದಿಂದ ಇದುವರೆಗೆ ಯಾರೂ ಸಂತ್ರಸ್ತರ ನೆರವಿಗೆ ಸ್ಪಂದಿಸಲಿಲ್ಲ ಎನ್ನುವುದು.
ಇದಕ್ಕೆ ಒಂದು ಅಪವಾದ ಎನ್ನುವಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಈ ಬಾರಿಯ ಶಿವಣ್ಣನ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಇದೇ ಶುಕ್ರವಾರ ಜುಲೈ 12ರಂದು ಶಿವಣ್ಣ ಅವರಿಗೆ 51ನೇ ಹುಟ್ಟುಹಬ್ಬದ ಸಂಭ್ರಮ. ಅಂದು ಶಿವಣ್ಣನ ಅಭಿಮಾನಿಗಳು ಉತ್ತರಾಖಂಡ ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
ಈ ಸಂಬಂಧ ಜಾಹೀರಾತು ನೀಡಿರುವ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಶಿವಣ್ಣನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿ, ಗಂಧದಗುಡಿ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಶ್ರೀರಾಮ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಶಿವು ಅಡ್ಡ ಮತ್ತು ಶಿವ ಸೈನ್ಯ ಸಂಘದವರು ಶಿವಣ್ಣನ ಅಭಿಮಾನಿಗಳಿಗೆ ಜಂಟಿಯಾಗಿ ಮನವಿ ಸಲ್ಲಿಸಿದ್ದಾರೆ.
ನಾಗಾವರದಲ್ಲಿರುವ ಶಿವಣ್ಣನ ಮನೆಗೆ ಹಾರ, ತುರಾಯಿ, ಕೇಕ್ ಜೊತೆಗೆ ಬರಬೇಡಿ, ಬದಲಾಗಿ ಉತ್ತರಾಖಂಡ ಸಂತ್ರಸ್ತರಿಗೆ ನಿಮ್ಮ ಕೈಲಾದ ದೇಣಿಗೆ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.
ತೆಲುಗು, ತಮಿಳು, ಹಿಂದಿ ಚಿತ್ರರಂಗದ (ಕೆಲವರಾದರೂ) ಸೆಲೆಬ್ರಿಟಿಗಳು ನೆರೆ ಸಂತ್ರಸ್ತರಿಗೆ ಈಗಾಗಲೇ ಸಹಾಯ ಮಾಡಿರುವಾಗ ಅಭಿಮಾನಿಗಳ ಸಂಘವೊಂದು ಈ ಕೆಲಸಕ್ಕೆ ಮುಂದಾಗಿರುವುದು ಮೆಚ್ಚಬೇಕಾದ ಸಂಗತಿ.
ರಾಜೇಶ್ ಅಭಿನಯದ ದೇವರ ದುಡ್ಡು ಚಿತ್ರದ ಜನಪ್ರಿಯ 'ಒಳಗಿನ ಕಣ್ಣನು ತೆರೆಸಿದೆಯೋ' ಹಾಡಿನಲ್ಲಿ ಬರುವ ಸಾಹಿತ್ಯ: ಎಲ್ಲಾ ಶೂನ್ಯಾ.. ಎಲ್ಲವೂ ಶೂನ್ಯ.. ಉಳಿಯುವುದೊಂದೇ ದಾನಧರ್ಮ, ತಂದ ಪುಣ್ಯಾ..


Click it and Unblock the Notifications











