9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು?
ಫೆಬ್ರವರಿ 2 ರಿಂದ 9 ರವರೆಗೆ 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಯಲಿದ್ದು, ಚಿತ್ರೋತ್ಸವಕ್ಕೆ ಸೈಲೆಂಟ್ ಆಗಿ ಎಲ್ಲಾ ತಯಾರಿ ನಡೆಯುತ್ತಿದೆ. ಚಲನಚಿತ್ರೋತ್ಸವದಲ್ಲಿ ಅಂತರರಾಷ್ಟ್ರೀಯ, ಏಷ್ಯಾ ಮತ್ತು ಕನ್ನಡ ಸ್ಪರ್ಧಾ ವಿಭಾಗಗಳಿದ್ದು, ಈ ಭಾರಿ 12 ಕನ್ನಡ ಚಿತ್ರಗಳು ಕನ್ನಡ ಸ್ಪರ್ಧಾ ವಿಭಾಗದಲ್ಲಿವೆ.[ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016ರ ವಿಶೇಷತೆಗಳು]
9ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪರ್ಧಿಸಲಿರುವ ಆ 12 ಸಿನಿಮಾಗಳಲ್ಲಿ ಏಳು ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ. ಈ ಹನ್ನೆರಡು ಸಿನಿಮಾಗಳಲ್ಲಿ ಒಂದು ಸಿನಿಮಾ ವನ್ನು ಮಾತ್ರ ಜ್ಯೂರಿ ವಿಜೇತ ಸಿನಿಮಾ ಆಗಿ ಆಯ್ಕೆ ಮಾಡಲಿದೆ. ಆದರೆ ಅದಕ್ಕೂ ಮೊದಲು ಚಿತ್ರೋತ್ಸವದಲ್ಲಿ ಸಿನಿ ಪ್ರಿಯರು ನೋಡಬಹುದಾದ ಆ 12 ಸಿನಿಮಾ ಗಳು ಯಾವುವು ತಿಳಿಯಬೇಕಲ್ವಾ? ಚಿತ್ರಗಳ ಲೀಸ್ಟ್ ಇಲ್ಲಿದೆ ನೋಡಿ..

ಆಕ್ಟರ್
ದಯಾಳ್ ಪದ್ಮನಾಭನ್ ನಿರ್ದೇಶನದ 'ಆಕ್ಟರ್' ಸಿನಿಮಾ ಫೆಬ್ರವರಿ 2 ರಿಂದ 9 ರವರೆಗೆ ನಡೆಯಲಿರುವ 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಆಯ್ಕೆ ಆಗಿದೆ. ಈ ಚಿತ್ರದಲ್ಲಿ ನವೀನ್ ಕೃಷ್ಣಮೂರ್ತಿ ಅಭಿನಯಿಸಿದ್ದು, ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು
ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶೃತಿ ಹರಿಹರನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜೂನ್ 3, 2016 ರಂದು ಚಿತ್ರ ಬಿಡುಗಡೆ ಆಗಿ ಸ್ಯಾಂಡಲ್ ವುಡ್ ಜನಪ್ರಿಯತೆ ಗಳಿಸಿತು.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]

ಕಿರಗೂರಿನ ಗಯ್ಯಾಳಿಗಳು
ಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಮೂಲ ಕಥೆಯನ್ನು ಸಿನಿಮಾ ಮಾಡುವಲ್ಲಿ ಖ್ಯಾತ ನಿರ್ದೇಶಕಿ ಡಿ.ಸುಮನ್ ಕಿತ್ತೂರು ಯಶಸ್ವಿಯಾದ ಚಿತ್ರವೇ 'ಕಿರಗೂರಿನ ಗಯ್ಯಾಳಿಗಳು'. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಶ್ವೇತಾ ಶ್ರೀವಾತ್ಸವ್, ಸುಕೃತಾ ವಾಗ್ಲೆ, ಮಾನಸ ಜೋಷಿ, ಸೋನು ಗೌಡ, ಕಿಶೋರ್, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ರಾಹುಲ್ ಮಾಧವ್, ಯೋಗೇಶ್, ಕಾರುಣ್ಯ ರಾಮ್, ಎಸ್ ನಾರಾಯಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ಈಗಾಗಲೇ ಬಿಡುಗಡೆ ಆಗಿದೆ.[ವಿಮರ್ಶೆ: 'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು]

ರಾಮಾ ರಾಮಾ ರೇ
2016 ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಸಿನಿಮಾ ಆದರೂ ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದ ಚಿತ್ರ 'ರಾಮಾ ರಾಮಾ ರೇ'. ಸತ್ಯ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಸಿನಿಮಾ 2016 ಅಕ್ಟೋಬರ್ 21 ರಂದು ಬಿಡುಗಡೆ ಆಗಿತ್ತು.['ರಾಮಾ ರಾಮಾ ರೇ' ವಿಮರ್ಶೆ: ಕ್ಲಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಸಿನಿಮಾ]

ಉಪ್ಪಿನ ಕಾಗದ
ಬಿ. ಸುರೇಶ್ ನಿರ್ದೇಶನದ 'ಉಪ್ಪಿನ ಕಾಗದ' ಚಿತ್ರದ ಪ್ರೀಮಿಯರ್ ಪ್ರದರ್ಶನ 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ಟಿ.ಎಸ್.ನಾಗಾಭರಣ, ಮಂಡ್ಯ ರಮೇಶ್, ಮುರಳಿ ಶಂಗೇರಿ, ಅಪೂರ್ವ ಭಾರದ್ವಾಜ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದು, ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪಲ್ಲಟ
ರಘು ಎಸ್.ಪಿ ರವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಈ ಚಿತ್ರಕ್ಕೆ ಅಭಿಜಿತ್ ಉನ್ನಿ ಸಂಗೀತ ನೀಡಿದ್ದಾರೆ.

ಕಹಿ
ನವ ನಿರ್ದೇಶಕ ಅರವಿಂದ ಶಾಸ್ತ್ರಿ ನಿರ್ದೇಶನದ 'ಕಹಿ' ಸಿನಿಮಾ ಸಹ 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧೆಗೆ ಆಯ್ಕೆ ಆಗಿದೆ. ಈ ಚಿತ್ರ ನವೆಂಬರ್ 4, 2016 ರಲ್ಲಿ ಬಿಡುಗಡೆ ಆಗಿ, ಸಸ್ಪೆನ್ಸ್ ಥ್ರಿಲ್ಲಿಂಗ್ ಕಥೆಯಿಂದ ಪ್ರೇಕ್ಷಕರನ್ನ ರಂಜಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕಂಡಿತ್ತು.[ಚಿತ್ರ ವಿಮರ್ಶೆ: 'ಕಹಿ' ಅನುಭವ, ಉಪ್ಪು-ಹುಳಿ-ಖಾರದ ಅಭಾವ]

ಇತರೆ ಸಿನಿಮಾಗಳು
ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಬೆಕ್ಕು', ಅಮರದೇವ ನಿರ್ದೇಶಿಸಿರುವ ' ಅಲೆಮಾರಿಯ ಆತ್ಮಕಥೆ', ಸಬಾಸ್ಟಿನ್ ಡೇವಿಡ್ ನಿರ್ದೇಶನದ 'ಧ್ವನಿ', ಸಾಲೋಮನ್ ಕೆ.ಜಾರ್ಜ್ ನಿರ್ದೇಶಿಸಿರುವ 'ಕಂದ', ಮಹಾಂತೇಶ್ ನಿರ್ದೇಶನದ `6 `3' ಚಿತ್ರಗಳು 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ವಿಭಾಗದಲ್ಲಿ ಸ್ಪರ್ಧೆಗೆ ಆಯ್ಕೆ ಆಗಿವೆ.


Click it and Unblock the Notifications











