'ಕಾಂತಾರ' ಚಿತ್ರ ವೀಕ್ಷಿಸಲು ಬಂದ ಮುಸ್ಲಿಂ ಜೋಡಿಯ ಮೇಲೆ ಗುಂಪಿನಿಂದ ಹಲ್ಲೆ
ಸಿನಿಮಾಗಳನ್ನು ಧರ್ಮದ ದೃಷ್ಟಿಯಿಂದ ನೋಡುವ ಅಥವಾ ಸಿನಿಮಾಗಳಲ್ಲಿಯೂ ಧರ್ಮ ಹುಡುಕುವ ಹಾಗೂ ಸಿನಿಮಾಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಸಂಗತಿಗಳು ಇತ್ತೀಚೆಗೆ ಹೆಚ್ಚಾಗಿವೆ. 'ದಿ ಕಶ್ಮೀರ್ ಫೈಲ್ಸ್', 'ಆಕ್ಸಿಡೆಂಟಲ್ ಪಿಎಂ' ಇನ್ನಿತರೆ ಸಿನಿಮಾಗಳು ಧರ್ಮ ಹಾಗೂ ರಾಜಕಾರಣದ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದ್ದವು. 'ಕಾಂತಾರ' ಸಿನಿಮಾ ಸಹ ಇದೇ ಮಾದರಿಯ ಚರ್ಚೆಗೆ ಕಾರಣವಾಗಿತ್ತು.
ಅದರಲ್ಲಿಯೂ ನಿರ್ದೇಶಕ, ನಟ ರಿಷಬ್ ಶೆಟ್ಟಿ, ನರೇಂದ್ರ ಮೋದಿಯವರನ್ನು ಹೊಗಳಿ, ರಾಹುಲ್ ಗಾಂಧಿಗೆ 'ನೋ ಕಮೆಂಟ್ಸ್' ಎಂದ ಬಳಿಕವಂತೂ 'ಕಾಂತಾರ' ಸಿನಿಮಾವನ್ನು ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡವರು ವಿಪರೀತ ಹೊಗಳಿ, ಬೆಂಬಲಿಸಿದರು. ಅದರ ಜೊತೆಗೆ ಹಿಂದುತ್ವಕ್ಕೂ ಸಿನಿಮಾವನ್ನು ಜೋಡಿಸಲಾಗಿತ್ತು. ಸಿನಿಮಾದ ಕತೆಯೂ ಇದಕ್ಕೆ ಪೂರಕವಾಗಿತ್ತು. ಈ ಕಾರಣಕ್ಕೆ ಒಂದು ಕೋಮಿನವರು ಸಿನಿಮಾವನ್ನು ವಿರೋಧಿಸಿದ್ದು ಕೆಲವೆಡೆ ವರದಿಯಾಗಿತ್ತು.
ಬಹುತೇಕ ಎಲ್ಲವನ್ನೂ ಕೋಮು ದೃಷ್ಟಿಯಿಂದಲೇ ನೋಡುತ್ತಿರುವ ಕರ್ನಾಟಕದ ಕರಾವಳಿ, 'ಕಾಂತಾರ'ವನ್ನೂ ಅದೇ ದೃಷ್ಟಿಯಿಂದ ನೋಡುತ್ತಿದ್ದು, ಇಂದು 'ಕಾಂತಾರ' ಸಿನಿಮಾವನ್ನು ನೋಡಲು ಬಂದ ಮುಸ್ಲಿಂ ಯುವ ಜೋಡಿಯನ್ನು ತಡೆದು ಅವರ ಮೇಲೆ ಕೆಲ ಮುಸ್ಲಿಂ ಯುವಕರು ದಾಳಿ ಮಾಡಿದ್ದಾರೆ.

'ಕಾಂತಾರ' ನೋಡಲು ಬಂದ ಮುಸ್ಲಿಮರ ಮೇಲೆ ಹಲ್ಲೆ
'ಕಾಂತಾರ' ಸಿನಿಮಾ ವೀಕ್ಷಿಸಲು ಬಂದ ಮುಸ್ಲಿಂ ಜೋಡಿಗೆ ಗುಂಪೊಂದು ಹಲ್ಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ನಡೆದಿದೆ. ಮುಸ್ಲಿಂ ಯುವಜೋಡಿಗೆ 'ಕಾಂತಾರ' ಚಿತ್ರ ನೋಡದಂತೆ ತಾಕೀತು ಮಾಡಿದ ಗುಂಪು, ಮುಸ್ಲಿಂ ಯುವತಿಯೊಂದಿಗೆ ಆಗಮಿಸಿದ್ದ ಮುಸ್ಲಿಂ ಯುವಕ ಮೇಲೆ ಹಲ್ಲೆ ನಡೆಸಿ ಯುವತಿಗೆ ದಿಗ್ಬಂಧನ ವಿಧಿಸಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವಕ ಗುಂಪಿನ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ನೈತಿಕ ಪೊಲೀಸ್ಗಿರಿ ನಡೆಸಿದ ಐವರನ್ನು ಬಂಧಿಸಿದ್ದಾರೆ.

5-10 ಜನರ ಗುಂಪಿನಿಂದ ಹಲ್ಲೆ
ಇಪ್ಪತ್ತರ ಹರೆಯದ ಮಹಮ್ಮದ್ ಇಮ್ತಿಯಾಜ್ ಎಂಬ ಯುವಕ ತನ್ನ ಪ್ರೇಯಸಿಯೊಂದಿಗೆ ಬುಧವಾರ ಬೆಳಗ್ಗೆ 10.20 ಗಂಟೆಗೆ 'ಕಾಂತಾರ' ಚಿತ್ರ ವೀಕ್ಷಣೆಗೆಂದು ಸುಳ್ಯದ ಸಂತೋಷ್ ಥಿಯೇಟರ್ ಬಳಿ ಆಗಮಿಸಿದ್ದರು. ಆದರ ಚಿತ್ರಮಂದಿರದವರು ಚಿತ್ರ ಆರಂಭವಾಗೋದು ಹನ್ನೊಂದು ಗಂಟೆಗೆ ಎಂದು ಹೇಳಿದ್ದಾರೆ. ಹೀಗಾಗಿ ಇಬ್ಬರೂ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಂತು ಮಾತನಾಡುತ್ತಿರುವ ಸಂಧರ್ಭದಲ್ಲಿ ಸುಮಾರು 5-10 ಜನರ ಮುಸ್ಲಿಂ ಯುವಕರು ಗುಂಪು ಜೋಡಿ ಬಳಿ ಬಂದು ವಿಚಾರಣೆ ಮಾಡಿ ಹಲ್ಲೆಗೆ ಮುಂದಾಗಿದೆ.

ಇ-ಮೇಲ್ ಮೂಲಕ ದೂರು
'ಕಾಂತಾರ' ಚಿತ್ರ ನೋಡಲು ಬಂದಿರೋದು ಅಂತಾ ಹೇಳಿದಾಗ ಕುಪಿತಗೊಡ ಗುಂಪು ಜೋಡಿಗೆ ಯದ್ವಾತದ್ವಾ ಕೈಯಿಂದ ಹಲ್ಲೆ ನಡೆಸಿದೆ. ಈ ವೇಳೆ ಮಧ್ಯಪ್ರವೇಶಿಸಿದ ಥಿಯೇಟರ್ ಮಾಲೀಕರು ಜೋಡಿಯನ್ನು ಗುಂಪಿನಿಂದ ರಕ್ಷಿಸಿ ಚದುರಿಸಿದ್ದಾರೆ. ಹಲ್ಲೆ ಮಾಡಿದ ಗುಂಪಿನ ವಿರುದ್ಧ ಸಂತ್ರಸ್ತ ಯುವಕ ಇ-ಮೇಲ್ ಮೂಲಕ ಸುಳ್ಯ ಠಾಣೆಗೆ ದೂರು ನೀಡಿದ್ದಾನೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿ ಹಲ್ಲೆ ನಡೆಸಿ ಹಲ್ಲೆ ಮಾಡಿದ ಗುಂಪಿನಲ್ಲಿದ್ದ ಐವರನ್ನು ಬಂಧಿಸಿದ್ದಾರೆ.

ಬಂಧಿತರ ಹೆಸರುಗಳು
ಆರೋಪಿಗಳನ್ನು ಅಬ್ದುಲ್ ಹಮೀದ್, ಅಶ್ರಫ್, ಸಾದಿಕ್, ಜಾಬೀರ್ ಜಟ್ಟಿಪಳ್ಳ, ಸಿದ್ಧೀಕ್ ಬೋರುಗುಡ್ಡೆ ಅಂತಾ ಗುರುತಿಸಲಾಗಿದೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನೈತಿಕ ಪೊಲೀಸ್ ಗಿರಿ ನಡೆಸಿದವರ ವಿರುದ್ಧ ಕ್ರಮ ಕ್ಕಾಗಿ ಸಾರ್ವಜನಿಕರು ಆಗ್ರಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆಯುತ್ತಿದ್ದು, ಪೊಲೀಸರಿಗೆ ಇದು ಸವಲಾಗಿ ಪರಿಣಮಿಸಿದೆ.


Click it and Unblock the Notifications











