Don't Miss!
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಘಣ್ಣ ಅಭಿನಯದ 'ರಾಜಿ' ಸತಿ-ಪತಿಗಳ ಜೀವನಯಾನದ ಅಪರೂಪದ ಕಥೆ
ತೆಲುಗಿನಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಹಿರಿಯ ನಟಿ ಲಕ್ಷ್ಮಿ ಅಭಿನಯದಲ್ಲಿ ತನಿಕೆಳ್ಳಭರಣಿ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ 'ಮಿಥುನಂ'. ಸತಿ-ಪತಿ ಬದುಕಿನ ಸರಸ-ವಿರಸ ಸಂತೋಷ, ವಿರಹ ವಿಷಾದ ವಿನೋದಗಳು ಜಗತ್ತನ್ನು ಅನಾವರಣಗೊಳಿಸಿದ ಒಂದು ಅಪರೂಪದ ಚಿತ್ರ. ವಿಮರ್ಶಕರಿಂದ ಜೊತೆಗೆ ನೋಡಿದ ಪ್ರೇಕ್ಷಕರಿಂದಲೂ ಕೂಡ ಈ ಭಾವನಾತ್ಮಕ ಗಂಡ-ಹೆಂಡತಿ ಬದುಕಿನ ಭಾವೋದ್ವೇಗಗಳ ಚಿತ್ರ ವ್ಯಾಪಕ ಪ್ರಶಂಸೆಗೆ ಒಳಗಾಯಿತು. ಗಂಡ ಹೆಂಡತಿ ಎಂಬ ಜೋಡೆತ್ತಿನ ಬದುಕನ್ನು ಅತ್ಯಂತ ಭಾವ ಪ್ರಧಾನವಾಗಿ ಪ್ರಸ್ತುತ ಪಡಿಸುವಂತಹ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ ಮೂಡಿಬಂದಿವೆ. ಈಗ ಇಂತಹದೇ ಒಂದು ಪ್ರಯತ್ನ ಕನ್ನಡದಲ್ಲೂ ಕೂಡ ನಡೆದಿದೆ. ಹೌದು ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅಭಿನಯದಲ್ಲಿ ಪ್ರೀತಿ ಎಸ್ ಬಾಬು ಅವರು ರಾಘಣ್ಣ ಅವರಿಗೆ ಜೋಡಿಯಾಗಿ ಅಭಿನಯಿಸಿ ನಿರ್ದೇಶಿಸುತ್ತಿರುವ 'ರಾಜಿ' ಚಿತ್ರ ಸತಿಪತಿ ಸಂಬಂಧಗಳ ಭಾವ ಪ್ರಧಾನತೆಯನ್ನು ಪ್ರಧಾನವಾಗಿಟ್ಟುಕೊಂಡು ರೂಪಿಸಲಾಗಿದೆ. ಕನ್ನಡದಲ್ಲಿ ಮಹಿಳಾ ನಿರ್ದೇಶಕರೊಬ್ಬರು ಸಮರ್ಥವಾಗಿ ಬದುಕಿನ ಮತ್ತು ಸಂಬಂಧಗಳ ಅನಾವರಣಗೊಳಿಸಲು ಹೊರಟಿರುವ ಚಿತ್ರವೇ 'ರಾಜಿ'.
ಪುನೀತ್ ಅವರ ಅಕಾಲಿಕ ಮರಣದ ನಂತರ ಶಿವಣ್ಣ ಮತ್ತು ರಾಘಣ್ಣ ಇಬ್ಬರೂ ಕೂಡ ತಮ್ಮನ ಅಗಲಿಕೆಯ ದುಃಖವನ್ನು ಬಹಳಷ್ಟು ತಮ್ಮಲ್ಲೇ ತಾವು ನುಂಗಿಕೊಂಡು ದುಃಖ ಭರಿತ ಈ ಕ್ಷಣಗಳಲ್ಲಿ ಕೂಡ ಅಭಿಮಾನಿಗಳಿಗೆ ಆಸರೆಯಾಗಿ ನಿಲ್ಲುತ್ತಿದ್ದಾರೆ. 'ರಾಜಿ' ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ಪೋಷಿಸುತ್ತಿರುವ ರಾಘಣ್ಣ ಅವರು ಚಿತ್ರದ ಮುಹೂರ್ತದ ಸಂದರ್ಭದಲ್ಲಿ "ನನಗೆ ಹೆಣ್ಣು ಮಕ್ಕಳಿಲ್ಲ ಆದರೆ ಪುನೀತ್ ಅವರ ಪತ್ನಿ ಅಶ್ವಿನಿ ಮತ್ತು ಅವರ ಇಬ್ಬರು ಮಕ್ಕಳು ಕೂಡ ಇನ್ನು ಮುಂದೆ ನನ್ನ ಮೂರು ಹೆಣ್ಣುಮಕ್ಕಳು" ಅಂತ ಭಾವುಕವಾಗಿ ನುಡಿದಿದ್ದರು. ಇನ್ನು 'ರಾಜಿ' ಚಿತ್ರದಲ್ಲಿ ಪ್ರಧಾನ ಪಾತ್ರಧಾರಿಯಾಗಿ ಅಭಿನಯಿಸಿದ ರಾಘಣ್ಣ ಅಭಿನಯಿಸಿದ್ದಾರೆ.
ಅಪ್ಪು ಅವರ ಅಗಲಿಕೆಯ ನೋವಿನ ಮಧ್ಯೆ ಕೂಡ ರಾಘಣ್ಣ ಅವರು ಪಾತ್ರಕ್ಕೆ ತಮ್ಮನ್ನು ತಾವು ತನ್ಮಯತೆಯಿಂದ ತೊಡಗಿಸಿಕೊಂಡು ಅಭಿನಯಿಸಿದ್ದಾರೆ. ಅವರ ಅಭಿನಯ ಮತ್ತು ಎನರ್ಜಿ ಇಡೀ ತಂಡಕ್ಕೆ ಒಂದು ರೀತಿಯ ಟಾನಿಕ್ ಆಗಿತ್ತು ಅಂತ ಹೇಳಬಹುದು. ರಾಘಣ್ಣ ಅಭಿನಯದ 'ರಾಜಿ' ಚಿತ್ರ ತಂಡಕ್ಕೆ ಬಲ ಕೊಟ್ಟಿದೆ. ಖಂಡಿತವಾಗಿಯೂ ಅವರಿಗೆ ಈ ಚಿತ್ರಕ್ಕೆ ಪ್ರಶಸ್ತಿ ಬರಲೇಬೇಕು ಅನ್ನುತ್ತಾರ ಚಿತ್ರದ ಛಾಯಾಗ್ರಾಹಕರು ಮತ್ತು ಮೇಲುಸ್ತುವಾರಿಯನ್ನು ವಹಿಸಿಕೊಂಡಿರುವ ಹಿರಿಯ ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿ ಅವರು.
ಕನ್ನಡಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ಪ್ರೀತಿ ಎಸ್ ಬಾಬು
ಕನ್ನಡದಲ್ಲಿ ಬೆರಳೆಣಿಕೆಯಷ್ಟೇ ಮಹಿಳಾ ನಿರ್ದೇಶಕರಿದ್ದಾರೆ. ಸುಮನಾ ಕಿತ್ತೂರು, ರೂಪಾ ಅಯ್ಯರ್ ಅಂತಹ ಮಹಿಳಾ ನಿರ್ದೇಶಕರ ಸಾಲಿಗೆ ಈಗ ಪ್ರೀತಿ ಎಸ್ ಬಾಬು ಅವರು ಕೂಡ ಸೇರ್ಪಡೆಯಾಗುತ್ತಿದ್ದಾರೆ. ಮೂಲತಃ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮನೋಜ್ಞವಾದ ಅಭಿನಯದ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿರುವ ಪ್ರೀತಿ ಎಸ್ ಬಾಬು ಇದೆ ಮೊದಲ ಬಾರಿಗೆ 'ರಾಜಿ' ಚಿತ್ರದ ಮೂಲಕ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯಾವುದೇ ಹಂತದಲ್ಲೂ ಯಾವುದೇ ತರದ ರಾಜಿ ಇಲ್ಲದೆ ಚಿತ್ರವನ್ನು ಯಶಸ್ವಿಯಾಗಿ ಮತ್ತು ಸಮರ್ಥವಾಗಿ ಪ್ರಸ್ತುತಪಡಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.
ಚಿತ್ರೀಕರಣ ಮುಗಿಸಿದ 'ರಾಜಿ' ತಂಡ
ವಸುಮತಿ ಉಡುಪ ಅವರ 'ತಲ್ಲಣಿಸದಿರು ಮನವೇ' ಕಾದಂಬರಿ ಆಧಾರಿತ 'ರಾಜಿ' ಚಿತ್ರದ ಮುಹೂರ್ತ ಡಿಸೆಂಬರ್ 10ರಂದು ನಡೆಯಿತು. ಡಿಸೆಂಬರ್ 11ರಿಂದ ಸತತವಾಗಿ ಚಿತ್ರೀಕರಣ ಮಾಡಿ ಮುಗಿಸಿರುವ ತಂಡ ಈಗ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಸಕ್ರಿಯವಾಗಿದೆ. ಒಂದೇ ಹಂತದಲ್ಲಿ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ ಮಹಿಳಾ ನಿರ್ದೇಶಕಿ ಪ್ರೀತಿ ಎಸ್ ಬಾಬು. ಇನ್ನು ಈ ಚಿತ್ರದ ಬಗ್ಗೆ ನಿರ್ದೇಶಕಿ ಪ್ರೀತಿ ಎಸ್ ಬಾಬು ಅವರು ಹೇಳುವುದು "ಗಂಡ-ಹೆಂಡತಿ ನಡುವಿನ ಸುಂದರ ಒಪ್ಪಂದ 'ರಾಜಿ', ಜೀವನದಲ್ಲಿ ಏರಿಳಿತಗಳು ಸಹಜ. ಅದರಲ್ಲೂ ಗಂಡ ಹೆಂಡತಿ ಎಂದಾಗ ಅದು ಮತ್ತಷ್ಟು ಮತ್ತು ಜೀವನದ ಒಂದು ಭಾಗವೇ ಆಗಿರುತ್ತದೆ. ಗಂಡ- ಹೆಂಡತಿ ನಡುವಿನ ಒಂದು ಸುಂದರ ಪಯಣ ರಾಜಿ. ಆದರೆ ಇದರಲ್ಲೂ ಕೂಡ ಯಾರು ನಿರೀಕ್ಷಿಸದ ತಿರುವುಗಳಿವೆ. ಸಿನಿಮಾ ಭಾವನಾತ್ಮಕವಾಗಿ ಜನರನ್ನು ಸೆಳೆಯುತ್ತದೆ" ಅಂತ ಆತ್ಮವಿಶ್ವಾಸದಿಂದ ಹೇಳುತ್ತಾರೆ, ಈ ಚಿತ್ರದ ನಿರ್ಮಾಪಕರಲ್ಲೂ ಒಬ್ಬರಾಗಿರುವ ನಿರ್ದೇಶಕಿ ಪ್ರೀತಿ ಎಸ್ ಬಾಬು. ಮತ್ತೊಂದು ವಿಷಯವೆಂದರೆ ಈ ಚಿತ್ರದಲ್ಲಿ ರಾಘವೇಂದ್ರರಾಜಕುಮಾರ್ ಅವರಿಗೆ ನಿರ್ದೇಶನ ಮಾಡುವುದರ ಜೊತೆಗೆ ಅವರ ಮಡದಿಯ ಪಾತ್ರದಲ್ಲಿ ಕೂಡ ನಿರ್ದೇಶಕಿ ಪ್ರೀತಿ ಎಸ್ ಬಾಬು ಅಭಿನಯಿಸುತ್ತಿದ್ದಾರೆ.
ಉಪಾಸನಾ ಮೋಹನ್ ಸಂಗೀತ
ಸಾಧಾರಣವಾಗಿ ಸಿನಿಮಾ ಸಾಹಿತ್ಯವೆಂದರೆ ಅದು ಜನಪ್ರಿಯ ಸಾಹಿತ್ಯ ಅಂತ ಹೇಳಬಹುದು. ಶಿಷ್ಟ ಸಾಹಿತ್ಯಕ್ಕೆ ಅಲ್ಲಿ ಹೆಚ್ಚಿನ ಆದ್ಯತೆ ಇರುವುದಿಲ್ಲ. 'ರಾಜಿ' ಚಿತ್ರತಂಡ ಈ ವಿಚಾರದಲ್ಲಿ ಯಾವುದೇ ರಾಜಿಯಾಗದೆ,ಜನಪ್ರಿಯ ಸಾಹಿತ್ಯಕ್ಕೆ ಮೊರೆ ಹೋಗದೆ ಶಿಷ್ಟ ಸಾಹಿತ್ಯಕ್ಕೆ ಆದ್ಯತೆ ಕೊಟ್ಟಿರುವುದು ಅಭಿನಂದನಾರ್ಹ. ಅದರಲ್ಲೂ ಹಿರಿಯ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ಸಾಹಿತ್ಯ, ಭಾವಗೀತೆಗಳ ಗಾರುಡಿಗ ಉಪಾಸನಾ ಮೋಹನ್ ಅವರ ಸಂಗೀತ ಈ ಚಿತ್ರಕ್ಕೆ ಇರುವುದು ಮತ್ತೊಂದು ವಿಶೇಷ. ಕಥೆಯ ಹಿನ್ನಲೆಗೆ ಪೂರಕವಾಗಿ ಚಿತ್ರದಲ್ಲಿ 5 ಬಿಟ್ ಸಾಂಗ್ಸ್ ಹಾಗೂ ಒಂದು ಪೂರ್ಣ ಪ್ರಮಾಣದ ಹಾಡನ್ನು ಬಳಕೆ ಮಾಡಿದ್ದಾರೆ.
'ರಾಜಿ' ಸತಿಪತಿಗಳ ಕಥಾವಸ್ತು
ರಾಜಿ ಎಂದರೆ ಸಹಜವಾಗಿಯೇ ಇಬ್ಬರ ನಡುವೆ ಮನಸ್ತಾಪ ಉಂಟಾದಾಗ ಕೊನೆಗೆ ಮೂಡುವ ಒಂದು ಒಪ್ಪಂದ. ಸಾಧಾರಣವಾಗಿ ಗಂಡ-ಹೆಂಡತಿ ಜೀವನದಲ್ಲಿ ಆಗಾಗ ಜಗಳ ಆಗುವುದು ಮತ್ತು ರಾಜಿಯಾಗುವುದು ಸಹಜವಾಗಿ ನಡೆಯುತ್ತಿರುತ್ತದೆ. ಆದರೆ ಇಲ್ಲಿ ರಾ:ರಾಘವೇಂದ್ರ ಜಿ:ಜೀವಿತಾ ನಡುವಿನ ಪ್ರೀತಿಯ ಒಪ್ಪಂದವಿದೆ. ಆ ಪ್ರೀತಿಯ ಒಪ್ಪಂದದ ಜೊತೆಗೆ ಜೀವನದ ಸುಂದರ ಕಲ್ಪನೆ, ಪಯಣ ಮತ್ತು ಚಿತ್ರದ ಒಳಗೆ ಯಾರು ಯಾರೂ ನಿರೀಕ್ಷಿಸದ ಕಥಾವಸ್ತು ಕೂಡ ಇಲ್ಲಿ ಮೂಡಿಬರುತ್ತದೆ ಎಂಬುದು ಚಿತ್ರತಂಡದ ಒಟ್ಟಾರೆ ಅಭಿಪ್ರಾಯ. ರಾಘವೇಂದ್ರ ರಾಜಕುಮಾರ್, ಪ್ರೀತಿ ಎಸ್ ಬಾಬು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಪ್ರತಾಪ್ ಸಿಂಹ, ಎಸ್ ಬಸವರಾಜ್ ಮೈಸೂರು, M.D ಕೌಶಿಕ್ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ಎಸ್.ಹರೀಶ್ ಅವರು ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಪಿ.ವಿ.ಆರ್ ಸ್ವಾಮಿಯವರು ಛಾಯಾಗ್ರಹಣದ ಜೊತೆಗೆ ಇಡೀ ಚಿತ್ರದ ಬೆನ್ನೆಲುಬಾಗಿ ಕೂಡ ಕೆಲಸ ಮಾಡಿದ್ದಾರೆ. ನಾಗೇಶ್ ಎಂ ಸಂಕಲನವಿರುವ ಈ ಚಿತ್ರವನ್ನು ಬಸವರಾಜ್ ಎಸ್ ಮೈಸೂರು ಮತ್ತು ಪ್ರೀತಿ ಎಸ್ ಬಾಬು ನಿರ್ಮಿಸಿದ್ದಾರೆ.