Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಕೆಆರ್ ವಿರುದ್ಧ ಆರ್ಸಿಬಿ ಸೋಲಿನ ಬಗ್ಗೆ ಸುದೀಪ್ ಹೇಳಿದ್ದು ಹೀಗೆ
ನಟ ಸುದೀಪ್ಗೆ ಕ್ರಿಕೆಟ್ ಅಚ್ಚು-ಮೆಚ್ಚು. ಸಿನಿಮಾದ ನಂತರ ಬಹುವಾಗಿ ಇಷ್ಟ ಪಡುವುದು ಕ್ರಿಕೆಟ್. ಅದೇ ಕಾರಣಕ್ಕಾಗಿ ಐಪಿಎಲ್ ವೀಕ್ಷಿಸಲೆಂದು ಸುದೀಪ್ ದುಬೈಗೆ ತೆರಳಿದ್ದಾರೆ.
ದುಬೈನಲ್ಲಿರುವ ಸುದೀಪ್ ಅವರನ್ನು ಅಲ್ಲಿನ ಜನಪ್ರಿಯ ಮಾಧ್ಯಮ ಗಲ್ಫ್ ನ್ಯೂಸ್ ಸಂದರ್ಶನ ಮಾಡಿದ್ದು, ಐಪಿಎಲ್, ಆರ್ಸಿಬಿ, ಸುದೀಪ್ರ ಕ್ರಿಕೆಟ್ ಪ್ರೀತಿ ಮತ್ತು ತಮ್ಮ ಸಿನಿಮಾ ಹಲವು ವಿಷಯಗಳ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ಅದರಲ್ಲೂ ಆರ್ಸಿಬಿ ಬಗ್ಗೆ ಸುದೀಪ್ ಆಡಿರುವ ಮಾತುಗಳು ಪ್ರತಿಯೊಬ್ಬ ಆರ್ಸಿಬಿಯನ್ನ ಮನದ ಮಾತುಗಳಾಗಿವೆ, ಆರ್ಸಿಬಿ ಮೇಲೆ, ವಿಶೇಷವಾಗಿ ಕ್ರಿಕೆಟ್ ಮೇಲೆ ಸುದೀಪ್ಗಿರುವ ಅಭಿಮಾನವನ್ನು ಸಾರಿ ಹೇಳುತ್ತಿವೆ ಸುದೀಪ್ ಆಡಿರುವ ಮಾತುಗಳು.
ಕೆಕೆಆರ್ ವಿರುದ್ಧ ಆರ್ಸಿಬಿ ಹೀನಾಯವಾಗಿ ಸೋತ ಬಗ್ಗೆ ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ''ಎರಡು ದೇಶಗಳು ಯುದ್ಧ ಮಾಡುವಾಗ ಒಂದು ದಿನ ನಮ್ಮ ದೇಶಕ್ಕೆ ಯುದ್ಧದಲ್ಲಿ ಹಿನ್ನೆಡೆ ಆಯಿತೆಂದರೆ ನಾವು ದೇಶದ ಮೇಲಿನ ಗೌರವ, ಪ್ರೀತಿ ಕಳೆದುಕೊಳ್ಳುತ್ತೇವೆಯೇ. ಇದು ಸಹ ಹಾಗೆಯೇ ಆರ್ಸಿಬಿ ಮೇಲಿನ ಅಭಿಮಾನ, ಪ್ರೀತಿ ಕಡಿಮೆ ಆಗುವುದಿಲ್ಲ'' ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ ಸುದೀಪ್.
ಕ್ರೀಡೆ ವಿಷಯದಲ್ಲಿ ಏಕೆ ಇಷ್ಟೋಂದು ಆತುರ: ಸುದೀಪ್ ಪ್ರಶ್ನೆ
''ವೈಯಕ್ತಿಕ ಜೀವನದಲ್ಲಿ ಹಿನ್ನಡೆ ಆದಾಗ ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತೇವೆ, ಮುಂದೆ ಒಳ್ಳೆಯದಾಗುತ್ತದೆ ಎಂದು ಕಾಯುತ್ತೇವೆ. ಆದರೆ ಕ್ರೀಡೆ ವಿಷಯಕ್ಕೆ ಬಂದಾಗ ಒಂದು ಸೋಲು, ಒಂದು ಹಿನ್ನಡೆಯನ್ನು ಸಹಿಸಿಕೊಳ್ಳುವುದಿಲ್ಲ. ಇದು ಏಕೆ?'' ಎಂದು ಪ್ರಶ್ನಿಸಿದ ಸುದೀಪ್, ಕ್ರಿಕೆಟ್ ನೋಡುವ ಬಹುತೇಕರು ಕೈಯಲ್ಲಿ ಕಲ್ಲು ಹಿಡಿದೇ ಕೂತವರಂತೆ ವರ್ತಿಸುತ್ತಾರೆ. ಸೋತ ಕೂಡಲೇ ಟೀಮ್ ಮೇಲೆ ಕಲ್ಲು ತೂರಲು ಆರಂಭಿಸುತ್ತಾರೆ. ಇದು ಸರಿಯಲ್ಲ'' ಎಂದು ಕ್ರೀಡಾ ಸ್ಪೂರ್ತಿಯ ಬಗ್ಗೆಯೂ ಹೇಳಿದರು ಸುದೀಪ್.
ಹಿರೋಗಳಿಗೂ ಹಿಟ್, ಫ್ಲಾಪ್ಗಳು ಇರುತ್ತವೆ: ಸುದೀಪ್
''ಅವರು ಪ್ರತಿಭಾವಂತರು, ನಮ್ಮ ಹೀರೋಗಳು, ಅವರಲ್ಲಿ ವಿಶೇಷವಾದ ಪ್ರತಿಭೆ ಇದೆ ಅದಕ್ಕಾಗಿಯೇ ಅವರು ಆಡುತ್ತಿದ್ದಾರೆ. ನಾವೆಲ್ಲ ಕೂತು ನೋಡುತ್ತಿದ್ದೇವೆ. ಅವರಲ್ಲಿ ಪ್ರತಿಭೆ ಇರದೇ ಇದ್ದಿದ್ದರೆ ಬೇರೆಯವರು ಆ ಜಾಗದಲ್ಲಿ ಆಡುತ್ತಿರುತ್ತಿದ್ದರು. ಸಿನಿಮಾ ಹೀರೋಗಳಾದ ನಮಗೂ ಹಿಟ್, ಫ್ಲಾಪ್ಗಳು ಇರುತ್ತವೆ. ಸಿನಿಮಾ ಫ್ಲಾಪ್ ಆದ ಕೂಡಲೇ ಅಭಿಮಾನಿಗಳು, ಓಹ್ ಇವನ ಕತೆ ಮುಗಿಯಿತು ಎನ್ನುವುದಿಲ್ಲ. ಕ್ರಿಕೆಟ್ ಸ್ಟಾರ್ಗಳು ಸಹ ಹಾಗೆಯೇ'' ಎಂದು ಸಿನಿಮಾ ಹಾಗೂ ಕ್ರೀಡೆಗೆ ಸಮೀಕರಣ ಮಾಡಿ ಹೇಳಿದ್ದಾರೆ ಸುದೀಪ್.
ಕೊಹ್ಲಿ ವಿಕೆಟ್ ಪಡೆದ ಪ್ರಸಿದ್ಧ ಕೃಷ್ಣ ಕನ್ನಡಿಗ: ಸುದೀಪ್
''ಕಳೆದ ಮ್ಯಾಚ್ನಲ್ಲಿ ಪ್ರಸಿದ್ಧ ಕೃಷ್ಣ, ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ಅವರು ನಮ್ಮ ಕರ್ನಾಟಕದವರು. ನಾವು ಅದಕ್ಕೆ ಖುಷಿ ಪಡಬೇಕೋ, ಬೇಸರ ಮಾಡಿಕೊಳ್ಳಬೇಕೊ? ಒಟ್ಟಿನಲ್ಲಿ ಐಪಿಎಲ್ನಿಂದ ಕೆಲವು ಅದ್ಭುತ ಪ್ರತಿಭೆಗಳು ದೇಶದ ಟೀಮ್ಗೆ ಸಿಗುತ್ತಿವೆ ಅದು ಬಹಳ ಸಂತಸದ ವಿಷಯ. ವಿರಾಟ್ ಕೊಹ್ಲಿ ಔಟ್ ಆದಾಗ ಸ್ವತಃ ಅವರೇ ಬೌಲರ್ ಅನ್ನು ಮೆಚ್ಚಿಕೊಂಡಿರುತ್ತಾರೆ ಎನಿಸುತ್ತದೆ. ಅಂತಿಮವಾಗಿ ಎಲ್ಲರೂ ಒಂದೇ ದೇಶದ ಆಟಗಾರರು, ಪರಸ್ಪರರನ್ನು ಅಭಿನಂದಿಸುತ್ತಾ, ಗೌರವಿಸುತ್ತಾ ಆಡುತ್ತಿದ್ದಾರೆ. ಆರ್ಸಿಬಿ ಸೋತ ಮ್ಯಾಚ್ನಲ್ಲಿ ಎದುರಾಳಿಗಳು ಬಹಳ ಚೆನ್ನಾಗಿ ಆಟ ಆಡಿದರು. ಅವರನ್ನು ಅಭಿನಂದಿಸೋಣ'' ಎಂದರು ಸುದೀಪ್.
ವಿರಾಟ್ ಕೊಹ್ಲಿ ನಂತರ ಕ್ಯಾಪ್ಟನ್ ಯಾರಾಗಬೇಕು?
ವಿರಾಟ್ ಕೊಹ್ಲಿ, ಆರ್ಸಿಬಿ ಕ್ಯಾಪ್ಟನ್ಸಿ ಬಿಡುತ್ತಿರುವ ಬಗ್ಗೆ ಮಾತನಾಡಿದ ಸುದೀಪ್, ''ವಿರಾಟ್ ಕೊಹ್ಲಿ ನಂತರ ಯಾರು ಕ್ಯಾಪ್ಟನ್ ಆಗಬೇಕು, ಆಗುತ್ತಾರೆ ಎಂಬುದು ನನಗೆ ತಿಳಿಯದ ವಿಷಯ. ಆದರೆ ಯಾರೇ ಆಗಲಿ ಅವರು ತಂಡವನ್ನು ಇನ್ನಷ್ಟು ಉತ್ತಮಗೊಳಿಸಲು ಯತ್ನಿಸುವುದಂತೂ ಖಾಯಂ. ಧೋನಿಗೆ ನಾಯಕತ್ವ ನೀಡಿದಾಗ ಅದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಅವರೊಬ್ಬ ಅದ್ಭುತ ಕ್ಯಾಪ್ಟನ್ ಆದರು. ಇನ್ನು ವಿರಾಟ್ ಕೊಹ್ಲಿ ಒಬ್ಬ ಅತ್ಯುತ್ತಮ ಆಟಗಾರ, ತಾವು ಏನು ಮಾಡುತ್ತಿದ್ದಾರೆ ಎಂಬುದರ ಸಂಪೂರ್ಣ ಅವರಿಗೆ ಇದೆ. ಅವರು ಏನೇ ಮಾಡಿದರು ತಂಡದ ಒಳ್ಳೆಯದಕ್ಕೆ ಮತ್ತು ತಮ್ಮ ಆಟದ ಬಗ್ಗೆ ಗಮನ ವಹಿಸಿಯೇ ಮಾಡಿರುತ್ತಾರೆ'' ಎಂದು ವಿಶ್ಲೇಷಿಸಿದ್ದಾರೆ ಸುದೀಪ್.