ಬಾಲ್ಯದ ಪ್ರೀತಿಯೇ ಗಂಡನಾಗಿ ಬಂದರೂ ಒಲ್ಲದ ಮನಸ್ಸಲ್ಲಿಯೇ ಸ್ವೀಕರಿಸಿದ ರಾಜಿ!
'ರಾಜಿ' ಧಾರಾವಾಹಿ ಮಹತ್ವದ ತಿರುವು ಪಡೆದುಕೊಂಡಿದೆ. ರಾಜಿ ಬಯಸಿದ್ದೆ ಸಿಕ್ಕಿದೆ. ಹಲವು ಸಮಸ್ಯೆಗಳ ಸುಳಿವಲ್ಲಿ ಸಿಲುಕಿ, ರಾಜಿ ಮುಕ್ತಿಯನ್ನೇನೋ ಪಡೆದಿದ್ದಾಳೆ. ಆದರೆ ಸಂತೋಷ ಎಂಬುದು ಇನ್ನು ಮರೀಚಿಕೆಯಾಗಿಯೇ ಇದೆ. ಎಷ್ಟೇ ನೋವು, ಸಂಕಟವಿದ್ದರೂ ರಾಜಿ ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅದೇ ಕಾರಣಕ್ಕೆ ಮನಸ್ಸಲ್ಲಿ ಬೆಟ್ಟದಷ್ಟು ಪ್ರೀತಿ ಇದ್ದರೂ ಪ್ರೇಮ್ನನ್ನು ಮದುವೆಯಾಗಲು ಒಪ್ಪಿದ್ದಳು. ಆದರೆ ವಿಧಿ ಬೇರೆಯದ್ದನ್ನೇ ಬರೆದಿತ್ತು.
ಸದ್ಯ ರಾಜಿ ಬಾಳಲ್ಲಿ ಹೊಸ ಬೆಳಕೊಂದು ಸೂಸಿದೆ. ಅದನ್ನು ರಾಜಿ ಸ್ವೀಕರಿಸುವ ರೀತಿ, ನಡೆದುಕೊಳ್ಳುವ ರೀತಿ ಬದುಕನ್ನು ಬದಲಿಸಬಹುದು. ಮುಂದಿನ ಹಾದಿಯೂ ಅಷ್ಟು ಸುಲಭದ್ದಲ್ಲ. ದ್ವೇಷಿಗಳ ಮನಸ್ಸನ್ನು ಗೆಲ್ಲಬೇಕಾಗಿದೆ. ಹೀಗಾಗಿ ಮನೆಯ ಮಗಳು ಸೊಸೆಯಾದಾಗ ಕೆಲವೊಂದು ಸವಾಲು ಸ್ವೀಕರಿಸಲು ರಾಜಿ ಸಿದ್ಧಳಾಗಬೇಕಿದೆ.

ರಾಜಿ ಕೊರಳಿಗೆ ತಾಳಿ ಕಟ್ಟಿದ ಕರ್ಣ
ಕರ್ಣ ತನ್ನ ತಂದೆಯ ಮಾತಿಗೆ ಬೆಲೆ ಕೊಡುವವನು. ಹೀಗಾಗಿ ಪರಿಸ್ಥಿತಿಗೆ ತಲೆಬಾಗಿದ್ದಾನೆ. ತಾವು ಏನೇ ಮಾಡಿದರೂ ವಿಧಿಯೆಂಬುದಿದೆಯಲ್ಲ ಅದೇ ಕೊನೆಗೆ ಸತ್ಯವಾಗಿದೆ. ರಾಜಿಯ ತಂದೆಗೆ ಮಾತು ಕೊಟ್ಟಿದ್ದ ಕರ್ಣನ ತಂದೆ ರಾಜಿಯ ಮದುವೆಯನ್ನು ಅದ್ಧೂರಿಯಾಗಿಯೇ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ವಿಧಿಯ ಆಟದ ಮುಂದೆ ಮನುಷ್ಯ ತಯಾರಿ ಯಾವುದು ನಡೆಯಲ್ಲ. ಹೀಗಾಗಿಯೇ ರಾಜಿಯ ಮದುವೆ ನಿಂತು ಹೋಯಿತು. ಕರ್ಣನ ತಂದೆ ಕುಸಿದು ಬಿದ್ದರು. ಗೆಳೆಯನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ನೋದುಕೊಂಡರು. ಇದೇ ವಿಚಾರವಾಗಿ ಕರ್ಣನ ಬಳಿ ಮಾತನಾಡಿದಾಗ, ತಂದೆಯ ಮಾತಿಗೆ ತುಟಿಕ್, ಪಿಟಿಕ್ ಎನ್ನದೆ ರಾಜಿಯನ್ನು ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಹೋಗಿ, ಎಲ್ಲರ ಮುಂದೆ ತಾಳಿ ಕಟ್ಟಿದ.

ಕರ್ಣನನ್ನು ಮದುವೆಯಾದ ರಾಜಿ
ಕರ್ಣ ಊರು ಬಿಟ್ಟು ಇನ್ನೆಲ್ಲೋ ಇದ್ದು ಓದುವಾಗ ರಾಜಿಗೆ ಬಾಲ್ಯದ ನೆನಪುಗಳೇ ಜೊತೆಯಾಗಿದ್ದವು. ಕರ್ಣನನ್ನು ಮನದಲ್ಲಿಯೇ ಗುಡಿಯೊಂದನ್ನು ಕಟ್ಟಿ ಪ್ರೀತಿಸಿ ಆರಾಧಿಸುತ್ತಿದ್ದಳು. ಆದರೆ ಕರ್ಣನಿಗೆ ಇದ್ಯಾವುದರ ಬಗ್ಗೆಯೂ ಅರಿವು ಇರಲಿಲ್ಲ. ಓದು, ಕೆಲಸ, ಪ್ರೀತಿ ಇಷ್ಟಕ್ಕೆ ಮಾತ್ರ ಆತನ ಗಮನವಿತ್ತು. ರಾಜಿ ತನ್ನ ಪ್ರೀತಿಯನ್ನು ಹೇಳಲೇ ಇಲ್ಲ. ಕರ್ಣ ಮನೆಗೆ ಬಂದಾಗ ಬದಲಾಗಿದ್ದ. ಪ್ರೀತಿಸಿದವಳ ಜೊತೆ ಬಂದಿದ್ದ. ಇದನ್ನು ಕಂಡ ರಾಜಿ ಮನಸ್ಸು ನಿಂತಲ್ಲಿಯೇ ನಡುಗಿ ಹೋಗಿತ್ತು. ಅಷ್ಟು ಪ್ರೀತಿಸಿದ ಹುಡುಗ ಕೈಮೀರಿ ಹೋದ ಸೂಚನೆ ಸಿಕ್ಕಿತ್ತು. ಅಂದಿನಿಂದ ಎಲ್ಲವನ್ನು ಮರೆತು ಪ್ರಸ್ತುತ ಜೀವನಕ್ಕೆ ಅಡ್ಜೆಸ್ಟ್ ಆಗಿದ್ದಳು ರಾಜಿ. ಆದರೆ ಈಗ ಎಲ್ಲವೂ ಬದಲಾಗಿದೆ. ಬಾಲ್ಯದ ಪ್ರೀತಿಯೇ ಗಂಡನಾಗಿ ಬಂದಿದ್ದಾನೆ. ಆದರೆ ರಾಜಿ ಮುಖದಲ್ಲಿ ಸಂತಸವಿಲ್ಲ. ಕಾರಣ ಪರಿಸ್ಥಿತಿಯ ಕೈಗೊಂಬೆಯಾಗಿ ಮದುವೆಯಾದ ದಿನವದು.

ರಾಜಿ ತವರನ್ನು ಹೇಗೆ ಸಂಭಾಳಿಸುತ್ತಾಳೆ?
ರಾಜಿಯನ್ನು ಎಲ್ಲರು ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದರು. ಕರ್ಣನ ಅಮ್ಮನು ಕೂಡ. ಆದರೆ ಇತ್ತೀಚೆಗೆ ಕೆಟ್ಟ ಜನರ ಮಾತು ಕೇಳಿ ಕರ್ಣನ ತಾಯಿ ಕೂಡ ರಾಜಿಯನ್ನು ದ್ವೇಷಿಸಲು ಶುರು ಮಾಡಿದ್ದಾಳೆ. ಹೀಗಾಗಿ ಮನೆಯಲ್ಲಿ ಒಂದಷ್ಟು ಜನ ದ್ವೇಷಿಗಳಾಗಿ ಬದಲಾಗಿದ್ದಾರೆ. ಮೊದಲಿದ್ದ ಹಾಗೇ ರಾಜಿ ಮನೆಕೆಲಸದವಳ ರೀತಿ ಇರುವುದಿಲ್ಲ. ಈಗ ಮನೆಯ ಸೊಸೆ. ತಂದೆಯ ಮಾತಿನಂತೆ ಇಬ್ಬರು ಮದುವೆಯಾಗಿದ್ದಾರೆ. ಆದರೆ ದ್ವೇಷ ಮಾಡುವ ಜನರೆದುರು ರಾಜಿಯ ಪ್ರೀತಿ ಗೆಲ್ಲಲೇಬೇಕಿದೆ.
ಕರ್ಣ ರಾಜಿಯನ್ನು ಹೆಂಡತಿಯಾಗಿ ಸ್ವೀಕರಿಸುತ್ತಾನಾ?
ಕರ್ಣ ಮತ್ತು ರಾಜಿ ಇಬ್ಬರು ಈ ಮದುವೆಯನ್ನು ಊಹೆಯೂ ಮಾಡಿಕೊಂಡಿರಲಿಲ್ಲ, ಬಯಸಿಯೂ ಇರಲಿಲ್ಲ. ರಾಜಿಯ ಮನಸ್ಸಲ್ಲಿ ಕರ್ಣ ಇದ್ದರೂ ಸಹ ಯಾವತ್ತಿಗೂ ಈ ರೀತಿ ಅತಿಯಾಸೆಯನ್ನು ಪಟ್ಟವಳೇ ಅಲ್ಲ. ಹೀಗಾಗಿ ಇನ್ನು ಮುಂದೆ ಕರ್ಣ ನಡೆದುಕೊಳ್ಳುವ ರೀತಿಯಲ್ಲಿಯೇ ಎಲ್ಲವೂ ನಿಂತಿದೆ. ಹಿಂದೊಮ್ಮೆ ಪ್ರೋಮೊ ನೋಡಿದ ನೆನಪಿರಬೇಕು. ನಾನು ನಿನ್ನನ್ನು ಗೆಳತಿಯಾಗಿ ನೋಡಬಲ್ಲೆ, ಹೆಂಡತಿಯಾಗಿ ಅಲ್ಲ ಎಂದಿದ್ದ ಕರ್ಣ. ಹೀಗಾಗಿ ಇಬ್ಬರ ಸಂಸಾರ ಶುರುವಾಗುವುದು ಅನುಮಾನವೇ ಇದೆ. ಇದರ ಮಧ್ಯೆ ಕರ್ಣನ ಪ್ರೀತಿಸುತ್ತಿದ್ದ ಹುಡುಗಿಯೂ ಅದೇ ಮನೆಯಲ್ಲಿರುವುದರಿಂದ ಆಕೆಯ ಮನಸ್ಥಿತಿ ದ್ವೇಷವಾಗಿ ತಿರುಗುವ ಸಾಧ್ಯತೆ ಇದೆ. ಅದೇ ಸಹಜವೇ ಸರಿ. ಆದರೆ ಈಗ ಕರ್ಣನ ಸಮಾಧಾನದ ಮಾತುಗಳು, ರಾಜಿಯ ಮುಗ್ಧತೆಯೇ ಇದಕ್ಕೆಲ್ಲಾ ಉತ್ತರ ನೀಡಲಿದೆ.


Click it and Unblock the Notifications











