ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ ಸ್ಮರಿಸಿದ 'ಮೇಜರ್' ಚಿತ್ರತಂಡ
ಭಾರತದ ರಿಯಲ್ ಹೀರೋ ದಿವಂಗತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಆಧರಿಸಿ ಸಿನಿಮಾ ತಯಾರಾಗುತ್ತಿದೆ. ನವೆಂಬರ್ 28ಕ್ಕೆ ಮೇಜರ್ ಹುತಾತ್ಮರಾದ ದಿನ. ಈ ದಿನದ ವಿಶೇಷವಾಗಿ ಮೇಜರ್ ಚಿತ್ರತಂಡ ಹುತಾತ್ಮ ಯೋಧನನ್ನು ಸ್ಮರಿಸಿಕೊಂಡಿದೆ.
ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸುತ್ತಿರುವ ಅದ್ವಿ ಶೇಶಾ ಅವರ ಲುಕ್ ಟೆಸ್ಟ್ ವಿಡಿಯೋ ಮತ್ತು ಫೋಟೋವನ್ನು ಬಿಡುಗಡೆ ಮಾಡಿದ ಚಿತ್ರತಂಡ. ತೆಲುಗು ನಟ ಮಹೇಶ್ ಬಾಬು ಈ ವಿಡಿಯೋ ರಿಲೀಸ್ ಮಾಡಿದ್ದಾರೆ. ಈ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಲಾಗಿದೆ.
2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ ಎನ್ ಎಸ್ ಜಿ ಕಮಾಂಡೋ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾಗಿದ್ದರು. ವೀರ ಯೋಧ ಸಂದೀಪ್ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಹನ್ನೆರಡು ವರ್ಷ ಆಗಿವೆ.

ಕಳೆದ ವರ್ಷ ತೆಲುಗು ಮತ್ತು ಹಿಂದಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಕುರಿತು, ಅವರ ಜೀವನವನ್ನ ಸ್ಫೂರ್ತಿಯಾಗಿಸಿಕೊಂಡು 'ಮೇಜರ್' ಎಂಬ ಸಿನಿಮಾ ಪ್ರಕಟಣೆ ಆಗಿತ್ತು.
'ಕ್ಷಣಂ' ಮತ್ತು 'ಗೂಢಚಾರಿ' ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಅದ್ವಿ ಶೇಶಾ ಈ ಸಿನಿಮಾ ಮಾಡ್ತಿದ್ದು, ಇಂದು ಲುಕ್ ಪರೀಕ್ಷೆಯ ಫೋಟೋ ಮತ್ತು ವಿಡಿಯೋ ಅನಾವರಣ ಮಾಡಿದ್ದಾರೆ.

ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಬರ್ತಿದ್ದು, ಸೋನಿ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಜೊತೆಗೆ ತೆಲುಗು ನಟ ಮಹೇಶ್ ಬಾಬು ಸಹ ನಿರ್ಮಾಪಕರಾಗಿ ಹಣ ಹೂಡುತ್ತಿದ್ದಾರೆ.
ಕೋಲ್ಕತ್ತಾದಲ್ಲಿ 1977 ಮಾರ್ಚ್ 15 ರಂದು ಜನಿಸಿದ ಸಂದೀಪ್ ಬೆಂಗಳೂರಿನ ಹೆಬ್ಬಾಳ ಸೇನಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು. 31ನೇ ವಯಸ್ಸಿನಲ್ಲಿ ಪ್ರಾಣ ತ್ಯಾಗ ಮಾಡಿದ ಸಂದೀಪ್ 9 ವರ್ಷಗಳ ಕಾಲ ಭಾರತದ ಸೇನೆಯ ಭಾಗವಾಗಿ ದುಡಿದಿದ್ದರು. ಅವರ ಸೇವೆಗೆ ಅಶೋಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


Click it and Unblock the Notifications











